Wednesday, August 26, 2015

A program in DD Chandana

I had the privilege of appearing in a Television program called 'Belagu' on a National TV channel Chandana. I shared my experience of writing Kannada Articles from a far away land being away from Karnataka. Some of the snapshots of my Interview in "Belagu" program in DD CHANDANA Channel.  









                                                                                         (Photo Credits - Ashok Shettar)

Monday, April 13, 2015

ಲಾವಾದಿಂದ ಹುಟ್ಟಿದ ನಡುಗಡ್ಡೆಗಳು - ಕೆನರಿ ಐಲಾಂಡ್ಸ್

ಹೀಗೊಂದು ಪ್ರವಾಸ. ವಾಯು ಮಾರ್ಗವಾಗಿಯೇ ಆ ಊರು ತಲುಪಲು ಸಾಧ್ಯ. ವಿಮಾನದಲ್ಲಿ ಪೈಲಟ್ ನಾವು ಗಮ್ಯ ಸ್ಥಳಕ್ಕೆ ತಲುಪಲಿದ್ದೇವೆ ಸೀಟ್ ಬೆಲ್ಟ್ ಹಾಕಿಕೊಳ್ಳಿ ಎಂದು ಹೇಳುತ್ತಿದ್ದಂತೆ ವಿಮಾನ ಕೆಳಗಿಳಿಯುವುದನ್ನೇ ನೋಡುತ್ತಿದ್ದರೆ ಸುತ್ತಲೂ ಸಮುದ್ರ. ಅಯ್ಯೋ ರಾಮ! ಇದೆಲ್ಲಿ ಇಳಿಸುತ್ತಿದ್ದಾರೆ ನಮ್ಮನ್ನ ಎಂದುಕೊಳ್ತಾ ಕೆಳಗೆ ನೋಡಿದಷ್ಟೂ ಸಮುದ್ರವೇ..."ಇಲ್ಲೇ ಎಲ್ಲೋ ಭೂಮಿಯೂ ಇರುತ್ತೆ ಸುಮ್ನೆ ಸಮುದ್ರದಲ್ಲಿ ವಿಮಾನವನ್ನು ಯಾಕ್ ಇಳ್ಸ್ತಾರೆ" ಅಂತ ಯೋಚಿಸ್ತಾ ಆದ್ರೂ ಮನಸಲ್ಲೆ ಇಷ್ಟ ದೇವರನ್ನು ಪ್ರಾರ್ಥಿಸುತ್ತಾ ನೋಡುತ್ತಿದ್ದಂತೆ ಸಮುದ್ರದ ಅಂಚಿನಲ್ಲಿಯೇ ಸಮುದ್ರಕ್ಕೇ ಕಟ್ಟೆ ಕಟ್ಟಿ ನಿರ್ಮಿಸಿರುವ ಸುಂದರ ರೋಡ್ ನಲ್ಲಿ ಅಂದರೆ ರನ್ ವೇ ನಲ್ಲಿ ವಿಮಾನ ಇಳಿದು ಸಾಗುತ್ತಿದ್ದರೆ ಸುತ್ತಲೂ ನೀಲ ಜಲರಾಶಿ. ಸಮುದ್ರಕ್ಕೆ ಒರಗಿಕೊಂಡೇ ನಿರ್ಮಿಸಲ್ಪಟ್ಟಿರುವ ಈ ಪುಟ್ಟ ವಿಮಾನ ನಿಲ್ದಾಣಗಳು ಜಗತ್ತಿನ ವಿವಿಧ ಭಾಗಗಳನ್ನು ಈ ಪುಟ್ಟ ನಡುಗಡ್ಡೆಗೆ ಜೋಡಿಸುವ ಪ್ರಮುಖ ಸಂಚಾರಿ ಸೇತುವೆ. ಈ ಪುಟ್ಟ ವಿಮಾನ ನಿಲ್ದಾಣದಿಂದ ಹೊರ ಬಂದು ಸುತ್ತಲೂ ಒಮ್ಮೆ ಕಣ್ಣಾಡಿಸಿದರೆ ಉದ್ದಕ್ಕೂ ಹರಡಿ ನಿಂತ ಕಡಲು. ಕಡಲಿಗೆ ಜೊತೆ ನೀಡುವ ಆಕಾಶ. ನೀಲಿ ಶರಧಿ ತನ್ನ ನೀಲಿಯನ್ನು ಮುಗಿಲಿಗೆ ಎರವಲು ಕೊಟ್ಟಿರುವಳೋ ಅಥವಾ ಆಗಸವೇ ಸಾಗರಿಗೆ ನೀಲಿ ಬಣ್ಣ ಬಳಿದಿಹನೋ ಎನಿಸುವಂತ ನೋಟ.
ಹೀಗೆ ವಿಮಾನದಿಂದ ಬಂದಿಳಿಯುತ್ತಿದ್ದಂತೆ ಹೊಸತೊಂದು ಲೋಕಕ್ಕೆ ಬಂದ ಅನುಭವ ನೀಡುವ ಈ ಸ್ಥಳ ಕೆನರಿ ಐಲಾಂಡ್ಸ್. ಇಂದೊಂದು ಅಟ್ಲಾಂಟಿಕ್ ಸಮುದ್ರದಲ್ಲಿನ ದ್ವೀಪ ಸಮೂಹ. ಸ್ಪೈನ್ ದೇಶದ ಆಡಳಿತವ್ಯಾಪ್ತಿಗೆ ಸೇರುವ ಈ ದ್ವೀಪಗಳನ್ನು ಕೆನರೀಸ್, ಗ್ರ್ಯಾನ್ ಕೆನರಿಯ ಎಂದೂ ಕರೆಯುತ್ತಾರೆ. ಕೆನರಿ ಐಲಾಂಡ್ಸ್ ನಲ್ಲಿರುವುದು ಪ್ರಮುಖವಾಗಿ ಏಳು ದ್ವೀಪಗಳು. ಸುತ್ತ ಮುತ್ತಲೂ ಇನ್ನೂ ಹಲವಾರು ಚಿಕ್ಕ ಚಿಕ್ಕ ನಡುಗಡ್ಡೆಗಳು ಇದ್ದರೂ ಅಲ್ಲಿ ಜನ ವಸತಿ ಇಲ್ಲದ ಕಾರಣ ಈ ಏಳು ನಡುಗಡ್ಡೆಗಳು ಮಾತ್ರ ಕೆನರಿ ಐಲ್ಯಾಂಡ್ಸ್ ಎಂದು ಗುರುತಿಸಲ್ಪಡುತ್ತದೆ. ಈ ನಡುಗಡ್ಡೆಗಳು ಸ್ಪೈನ್ ದೇಶದ ಆಡಳಿತ ವ್ಯಾಪ್ತಿಗೆ ಸೇರಿದ್ದರೂ ಇಲ್ಲಿನ ಜನ ಜೀವನ, ಸಂಸ್ಕೃತಿ, ಭೂಪರಿಸರ, ವಾತಾವರಣ ಹೀಗೆ ಎಲ್ಲಾ ವಿಷಯಗಳಲ್ಲಿಯೂ ತನ್ನದೇ ಆದ ಸ್ವಂತಿಕೆಯನ್ನು ಹೊಂದಿದೆ. ಆದರೆ ಎದುರಾಗುತ್ತಿದ್ದಂತೆ "ಹೊಲಾ, ಕೊಮೊ ಎಸ್ಟಾ" (ಹಲೋ, ಹೌ ಆರ್ ಯು) ಎಂದು ಕೇಳುವ ಇವರ ಭಾಷೆ ಮಾತ್ರಾ ಶುದ್ಧ ಸ್ಪ್ಯಾನಿಷ್. ಆದರೆ ಈ ನಡುಗಡ್ಡೆಗಳು ಸ್ಪೈನ್ ಗಿಂತಲೂ ಆಫ್ರಿಕಾಕ್ಕೆ ಹತ್ತಿರದಲ್ಲಿದ್ದು ಆಫ್ರಿಕಾದ ವಾಯವ್ಯಕ್ಕೆ ಸುಮಾರು 100 ಕಿಲೋಮೀಟರ್ ದೂರದಲ್ಲಿವೆ. ಯುರೋಪ್ ನ ಹಲವು ದೇಶಗಳಿಂದ ಈ ನಡುಗಡ್ಡೆಗಳಿಗೆ ವಿಮಾನ ಸಂಪರ್ಕವಿದೆ. ವಿಮಾನವಲ್ಲದೇ ಸ್ಪೈನ್ ನಿಂದ ಹಡಗು(Ferry)ಸಂಚಾರದ ವ್ಯವಸ್ತೆಯೂ ಇದೆ. ವಾರದಲ್ಲಿ ಎರಡು ದಿನ ಸ್ಪೈನ್ ನಿಂದ ಹೊರಡುವ ಹಡಗು ಸಂಚಾರಿಗಳನ್ನು, ವ್ಯಾಪಾರಸ್ಥರನ್ನು, ಸಾಮಾನು ಸರಕುಗಳನ್ನು, ಆಹಾರ ಪದಾರ್ಥಗಳನ್ನು ಈ ನಡುಗಡ್ಡೆಗಳಿಗೆ ತಲುಪಿಸುತ್ತದೆ.
ಪ್ರವಾಸಿಗರ ಸ್ವರ್ಗ ಕೆನರಿ ಐಲಾಂಡ್ಸ್ ನ ಬದುಕು ಟೂರಿಜಂ ಮೇಲೆಯೇ ಅವಲಂಬಿತವಾಗಿದೆ. ಸಮುದ್ರ ಹಾಗೂ ಸುಂದರ ಬೀಚ್ ಗಳಿಂದಲೇ ಹೆಸರುವಾಸಿಯಾದ ಈ ನಡುಗಡ್ಡೆಗಳ ವಾತಾವರಣವೂ ಅಷ್ಟೇ ಹಿತ. ಅತೀ ಎನಿಸುವಷ್ಟು ಚಳಿ ಮಳೆ ಬಿಸಿಲು ಯಾವುದೂ ಇಲ್ಲ. ಬೇಸಿಗೆಯಲ್ಲಿ ಸ್ವಲ್ಪ ಸುಡುವ ಬಿಸಿಲಿದ್ದರೂ ಸೆಕೆ ಇರುವುದಿಲ್ಲ. ಸುಂದರ ಬೀಚ್ ಗಳು ಹಾಗೂ ಸುಂದರ ಪಾರ್ಕ್ ಗಳನ್ನು ಹೊಂದಿರುವ ಈ ದ್ವೀಪಗಳು ಯುರೋಪಿನ ಪ್ರವಾಸ ಪ್ರಿಯರಿಗಂತೂ ಅಚ್ಚುಮೆಚ್ಚಿನ ತಾಣ. ಈ ದ್ವೀಪಗಳು ಭೂಮಿಯ ವಿಧವಿಧ ವೇಷಗಳನ್ನೂ, ಅವತಾರಗಳನ್ನೂ ಒಳಗೊಂಡ ಮಿನಿಯೆಚರ್ ನಂತೆ ಅಂದರೂ ಅತಿಶಯೋಕ್ತಿಯಾಗಲಾರದೇನೋ! ಎಲ್ಲೆಂದರಲ್ಲಿ ಕಾಣಸಿಗುವ ಮೈಲುದ್ದದ ಸುಂದರ ಬೀಚ್ ಗಳು, ಮರಳುಗಾಡಿನಲ್ಲಿ ಕಾಣಸಿಗುವ ಮರಳ ದಿಬ್ಬಗಳು, ವೈವಿಧ್ಯಮಯ ದಟ್ಟ ಹಸಿರು ಕಾಡು ಇವೆಲ್ಲವೂ ಈ ಚಿಕ್ಕ ದ್ವೀಪಗಳಲ್ಲೇ ಕಾಣಸಿಗುವುದೇ ಈ ದ್ವೀಪಗಳ ವಿಶೇಷ. ಅಷ್ಟೇ ಅಲ್ಲದೇ, ಐತಿಹಾಸಿಕ ಸ್ಥಳಗಳೂ, ವೋಲ್ಕಾನೋ ಗುಡ್ಡಗಳೂ ಈ ದ್ವೀಪಗಳ ಇತಿಹಾಸ ತೆರೆದಿಡುತ್ತವೆ. ಕೆನರಿ ಐಲಾಂಡ್ಸ್ ನ ಇನ್ನೊಂದು ವಿಶೇಷವೆಂದರೆ ಇದರ ರಾಜಧಾನಿ ಪಟ್ಟವನ್ನು 2 ನಗರಗಳು ಹಂಚಿಕೊಂಡಿವೆ. ಬೇರೆಲ್ಲವುಗಳಿಗಿಂತ ದೊಡ್ಡದಾದ ಎರಡು ನಡುಗಡ್ಡೆಗಳು ಸಾಂಟಾ ಕ್ರೂಜ್ ಡೇ ಟೆನರೀಫ್ ಮತ್ತು ಲಾಸ್ ಪಲ್ಮಾಸ್. ಈ ಎರಡೂ ಕೂಡ ಕೆನರಿ ಐಲಾಂಡ್ಸ್ ನ ರಾಜಧಾನಿ ನಗರಗಳು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಡಳಿತ ಕೇಂದ್ರ ಒಂದು ಪಟ್ಟಣದಿಂದ ಇನ್ನೊಂದಕ್ಕೆ ವರ್ಗಾಯಿಸಲ್ಪಡುತ್ತದೆ. ಕೆನರಿ ಐಲಾಂಡ್ಸ್ ನ ಇನ್ನುಳಿದ ನಡುಗಡ್ಡೆಗಳು ಲಂಜಾರೋಟ್, ಫ್ಯೂರ್ಟೋವೆಂಚೂರಾ, ಗ್ರಾನ್ ಕೆನರಿಯ, ಗೋಮೇರೋ ಮತ್ತು ಹಿಯರೋ. ಆಶ್ಚರ್ಯದ ಸಂಗತಿಯೆಂದರೆ ಈ ಎಲ್ಲಾ ನಡುಗಡ್ಡೆಗಳು ಒಂದರ ಪಕ್ಕವೇ ಇನ್ನೊಂದಿದ್ದರೂ ಪ್ರತಿ ನಡುಗಡ್ಡೆಯ ಭೂಚರ್ಯೆ ಒಂದರಿಂದ ಇನ್ನೊಂದು ತುಂಬಾ ವಿಭಿನ್ನವಾಗಿದೆ. ಇಲ್ಲಿ ಒಂದು ನಡುಗಡ್ಡೆಯಿಂದ ಇನ್ನೊಂದಕ್ಕೆ ಕರೆದುಕೊಂಡು ಹೋಗಲು ಪ್ರತಿದಿನ ಹಲವಾರು ಬೋಟ್ ಗಳು ಹಾಗೂ ಹಡಗುಗಳ ವ್ಯವಸ್ಥೆಯಿದೆ. ಕೆನರಿ ಐಲ್ಯಾಂಡ್ಸ್ ನ ಪ್ರಮುಖ ವಾಣಿಜ್ಯ ಕೇಂದ್ರ ಸಾಂಟಾ ಕ್ರೂಜ್ ಡೇ ಟೆನರೀಫ್. ಹೆಚ್ಚಿನ ಪಶ್ಚಿಮಾತ್ಯ ಪ್ರವಾಸಿಗರು ಈ ನಡುಗಡ್ಡೆಯಲ್ಲಿಯೇ ಹೋಲಿಡೇ ಹೋಮ್ ಅಥವಾ ಹೊಟೇಲ್ ಬುಕ್ ಮಾಡಲು ಇಷ್ಟ ಪಡುವುದರ ಉದ್ದೇಶ ನಿದ್ದೆಯೆನೆಂದೇ ತಿಳಿಯದ ಇಲ್ಲಿಯ ನೈಟ್ ಲೈಫ್. ಈ ನಡುಗಡ್ಡೆಯಲ್ಲಿ ವರ್ಷ ಪೂರ್ತಿ ರಾತ್ರಿ ಪೂರ್ತಿ ಪಾರ್ಟಿ ಗಳು ನಡೆಯುತ್ತಲೇ ಇರುವುದಷ್ಟೇ ಅಲ್ಲ ಎಲ್ಲಾ ಕ್ಲಬ್ ಗಳೂ ತುಂಬಿ ತುಳುಕುತ್ತಿರುತ್ತವೆ.

 ಲಾವಾದಿಂದ ಹುಟ್ಟಿದ ನಡುಗಡ್ಡೆಗಳು

 ಸಮುದ್ರ ಮಧ್ಯದಲ್ಲಿ ಈ ಸುಂದರ ಭೂ ತುಣುಕುಗಳು ಒಡಮೂಡಿದ್ದು ಕಡಲೊಳಗಿನ ಬೆಂಕಿಯಿಂದ! ಹೌದು, ಸುಮಾರು 23 ಮಿಲಿಯನ್ ವರ್ಷಗಳ ಹಿಂದೆಯೇ ಸಮುದ್ರದೊಳಗಿನ ಲಾವಾ ಪ್ರಕ್ರಿಯೆಯಿಂದಾಗಿ ಈ ನಡುಗಡ್ಡೆಗಳು ಸೃಷ್ಟಿಯಾಗತೊಡಗಿದವು. ಒಂದಾದ ಮೇಲೊಂದರಂತೆ ಹುಟ್ಟಿಕೊಂಡ ಈ ನಡುಗಡ್ಡೆಗಳ ಪಟ್ಟಿ ಇನ್ನೂ ಬೆಳೆಯುತ್ತಲೇ ಇದೆ. 2011 ರಲ್ಲಿ ಎಲ್ ಹಿಯರೋ ನಡುಗಡ್ಡೆಯ ಸಮೀಪದ ಸಮುದ್ರದಲ್ಲಿ ಲಾವಾ ಸ್ಪೋಟಗೊಂದು ಅದರಿಂದ ಆಚೆ ಎಸೆಯಲ್ಪಟ್ಟ ಕಲ್ಲುಬಂಡೆಗಳು, ಬೂದಿ, ಮರಳುಗಳು ಎಲ್ಲವೂ ಸೇರಿ ಸಮುದ್ರದೊಳಗೊಂದು ಬೆಟ್ಟ ನಿರ್ಮಿಸಿವೆ. ಅಲ್ಲಿಯ ವೋಲ್ಕಾನೋ ಚಟುವಟಿಕೆಗಳನ್ನು ಗಮನಿಸುತ್ತಿರುವ ವಿಜ್ನಾನಿಗಳು ಇನ್ನೊಂದು ನಡುಗಡ್ಡೆ ಹುಟ್ಟಿಕೊಳ್ಳುವ ಪ್ರಕ್ರಿಯೆ ಆಗಲೇ ನಡೆಯುತ್ತಿದೆ ಎನ್ನುತ್ತಿದ್ದಾರೆ. ಇಲ್ಲಿನ ಮೌಂಟ್ ಟೀಡ್ ಎಂಬ ವೋಲ್ಕಾನೋ ಪರ್ವತ ಜಗತ್ತಿನ ಮೂರನೇ ದೊಡ್ಡ ಲಾವಾ ಪರ್ವತವಾಗಿದ್ದು ಈ ಎಲ್ಲಾ ನಡುಗಡ್ಡೆಗಳು ಜಗತ್ತಿನ ಪ್ರಮುಖ ವೋಲ್ಕಾನೋ ಅಧ್ಯಯನ ಕೇಂದ್ರಗಳಾಗಿವೆ. 15ನೇ ಶತಕದಿಂದೀಚೆಗೆ ಇಲ್ಲಿ 14 ವೋಲ್ಕಾನೋ ಸ್ಪೋಟಗಳಾಗಿದ್ದು ತೀರ ಇತ್ತೀಚಿನದೆಂದರೆ 1971 ರಲ್ಲಿ ಲಾ ಪಲ್ಮಾ ನಡುಗಡ್ಡೆಯಲ್ಲಿ ಸಂಭವಿಸಿದ ಲಾವಾ ಸ್ಫೋಟ. ಇಲ್ಲಿ ಇಂದಿಗೂ ಭೂಮಿಯ ಒಳಗೆ ಕುದಿಯುವ ಮಾಗ್ಮಾ ಚಟುವಟಿಕೆಗಳು ನಡೆಯುತ್ತಲೇ ಇದೆ. ಲಂಜಾರೋಟ್ ನಡುಗಡ್ಡೆಯಲ್ಲಿರುವ ಟಿಮನಫಾಯಾ ನ್ಯಾಷನಲ್ ಪಾರ್ಕ್ ಎಂಬ ವೋಲ್ಕಾನೋ ಪ್ರದೇಶಕ್ಕೆ ಬರಬೇಕೆಂದರೆ ಸ್ವಲ್ಪ ದುಬಾರಿಯ ಪ್ರವೇಶ ಶುಲ್ಕ ನೀಡಿ ಅವರದೇ ಆದ ಬಸ್ ನಲ್ಲಿಯೇ ಬರಬೇಕು. ಬರುವ ಹಾದಿ ಕೂಡ ಮಣ್ಣಿನ ಹಾದಿ ಹಾಗೂ ಒಂದೇ ವಾಹನ ಚಲಿಸಬಹುದಾದಂತ ಕಿರು ಹಾದಿ. ಬಸ್ ನಲ್ಲಿ ಚಲಿಸುತ್ತಿದ್ದರೆ ಸುತ್ತಲೂ ದೃಷ್ಟಿ ಹಾಯಿಸಿದಷ್ಟಕ್ಕೂ ಕಾಣುವುದು ಲಾವಾದಿಂದ ಸುಟ್ಟು ಕರಕಲಾದ ಕಪ್ಪು ಮಣ್ಣು ಮತ್ತು ಮರಳ ದಿಬ್ಬಗಳು ಹಾಗೂ ಬಯಲು. ಈ ಲಾವಾ ಪರ್ವತಗಳನ್ನು ನ್ಯಾಷನಲ್ ಪಾರ್ಕ್ ಎಂದು ಹೆಸರಿಸಿ ಪ್ರವಾಸಿ ತಾಣವಾಗಿ ಪರಿವರ್ತಿಸಲಾಗಿದೆ. ಅವರದೇ ಬಸ್ ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಪ್ರಯಾಣಿಸಿ ಲಾವಾ ಬೆಟ್ಟದ ತುದಿ ತಲುಪಿದಾಗ ಸುತ್ತಲೂ ದೃಷ್ಟಿ ನಿಲುಕುವವರೆಗೂ ಕಾಣುವುದು ಬರೀ ಕಪ್ಪು ಮಣ್ಣು ಕಲ್ಲುಗಳ ರಾಶಿಗಳ ಬಯಲು, ನಡುನಡುವೆ ಲಾವಾ ಸ್ಫೋಟ ನಿರ್ಮಿಸಿದ ಗುಂಡಿಗಳು, ಸುರಂಗಗಳು ಹಾಗೂ ಚಿಕ್ಕ ಪುಟ್ಟ ದಿಬ್ಬಗಳು. ಈ ಲಾವಾ ಪರ್ವತದ ಕೇಂದ್ರದಲ್ಲಿ ಅಂದರೆ ಲಾವಾ ಉಕ್ಕಿದ್ದ ಜಾಗದಲ್ಲಿ ಒಳಗಡೆ ಇನ್ನೂ ಕುದಿಯುತ್ತಿರುವ ಮಾಗ್ಮಾ ದ ಬಗ್ಗೆ ಮಾಹಿತಿ ನೀಡಲು ಹಲವಾರು ಪ್ರಯೋಗಗಳನ್ನು ಮಾಡಿ ತೋರಿಸುತ್ತಾರೆ. ಲಾವಾ ಸ್ಫೋಟಗೊಂಡಿದ್ದ ಜಾಗದ ಮಧ್ಯ ಬಿಂದುವಿನಲ್ಲಿ ಒಂದು ಅಡಿ ಆಳದ ಗುಂಡಿ ತೊಡಿದ್ದಾರೆ. ಆ ಗುಂಡಿಯೊಳಗಿನ ಕಲ್ಲುಗಳು ಎಷ್ಟು ಬಿಸಿಯಾಗಿವೆಯೆಂದರೆ ಒಣಗಿದ ಹುಲ್ಲು ಹಾಕಿದೊಡನೆ ಬೆಂಕಿ ಹತ್ತಿಕೊಳ್ಳುತ್ತದೆ. ಅಲ್ಲಿಯೇ ಪಕ್ಕದಲ್ಲಿ ಸುಮಾರು 5 ಅಡಿಗಳಷ್ಟು ಆಳದ ಕೊಳವೆ ಬಾವಿ ಮಾಡಿದ್ದಾರೆ. ಆ ಕೊಳವೆ ಬಾವಿಯೊಳಗೆ ಒಂದು ಬಕ್ಕೆಟ್ ನೀರು ಸುರಿಯುತ್ತಾರೆ. ನೀರು ಸುರಿಯುತ್ತಲೇ ಬಗ್ಗನೇ ನೀರಿನ ಬುಗ್ಗೆ ಮೇಲೆದ್ದು ಸ್ಪೋಟಗೊಳ್ಳುತ್ತದೆ. ಭೂಮಿಯೊಳಗಿನ ಕಾವಿನಿಂದಾಗಿ ನೀರು ಬುಗ್ಗೆ ಏಳುತ್ತದೆ. ಅಲ್ಲಿಯೇ ಸ್ವಲ್ಪ ಮುಂದೆ ಅಗಲ ಬಾಯಿಯ ಒಂದು ಬಾವಿ ತೆಗೆದಿದ್ದಾರೆ. ಆ ಬಾವಿಯ ಸುತ್ತಲೂ ರಿಂಗ್ ಹಾಕಿ ಮೇಲಕ್ಕೆ ಗ್ರೀಲ್ಸ್ ಹಾಕಿ ಬಾವಿಯನ್ನು ಕವರ್ ಮಾಡಿದ್ದಾರೆ. ಆ ಗ್ರೀಲ್ಸ್ ನ ಮೇಲೆ ಚಿಕನ್ ಹಾಗೂ ಇನ್ನಿತರ ತಿನಿಸುಗಳನ್ನು ಬೇಯಿಸುತ್ತಾರೆ. ಈ ತಿಂಡಿಗಳು ಬೇಯುವುದು ಬಾವಿಯೊಳಗಿನ ಲಾವಾದ ಶಾಖದಿಂದ! ಲಾವಾದ ಶಾಖದಿಂದ ಬೇಯಿಸಿದ ತಿಂಡಿ ತಿನ್ನಲು ಅಲ್ಲಿಯೇ ನಿರ್ಮಿಸಿರುವ ಪುಟ್ಟ ರೆಸ್ಟೋರಂಟ್ ಕೂಡ ತನ್ನ ವಿಶಿಷ್ಟ ಆಕೃತಿಯಿಂದ ಮನಸೆಳೆಯುತ್ತದೆ. ಲಾವಾ ಪರ್ವತದಿಂದ ಮರಳಿ ಬರುವಾಗ ತಗ್ಗಿನಲ್ಲಿ ಕಪ್ಪು ಮಣ್ಣಿನ ಆ ಬಯಲಿನಲ್ಲಿ ಸುತ್ತಿ ಬಳಸಿ ಸಾಗುವ ಈ ಕಿರಿದಾದ ದಾರಿ ಒಂದು ತುದಿಯಿಂದ ಇನ್ನೊಂದು ತುದಿಯನು ಹುಡುಕುತ್ತಾ ಗೆರೆ ಎಳೆಯುವ ಮಕ್ಕಳ ಆಟವನ್ನು ನೆನಪಿಸಿತ್ತು!.  

ಜನಜೀವನ ಹಾಗೂ ಪ್ರವಾಸೋದ್ಯಮ

 ಪ್ರವಾಸೋದ್ಯಮದಿಂದಲೇ ಇಲ್ಲಿನ ಜನಜೀವನ. ಕೆನರಿ ಐಲಾಂಡ್ ನಲ್ಲಿ ಕೈಗಾರಿಕೋದ್ಯಮಗಳಾಗಲಿ, ವ್ಯವಸಾಯ ಬೇಸಾಯಗಳಾಗಲಿ ತುಂಬಾ ಕಡಿಮೆ. ಇಲ್ಲಿನ ಎಲ್ಲ ಜನಜೀವನ ಹಾಗೂ ಚಟುವಟಿಕೆಗಳು ಪ್ರವಾಸಿಗರಿಂದಲೇ ಹಾಗೂ ಪ್ರವಾಸಿಗರಿಗಾಗಿಯೇ.! ಪ್ರವಾಸೋದ್ಯಮವೇ ಇಲ್ಲಿನ ಜೀವಾಳ. ಹಾಗಾಗಿ ಇಲ್ಲಿ ಆಹಾರವಷ್ಟೇ ಅಲ್ಲ ಸಕಲ ಸರಂಜಾಮುಗಳೂ ಜೀವನಾವಶ್ಯಕ ವಸ್ತುಗಳೂ ಹೊರಗಿನಿಂದಲೇ ಅಮದಾಗಿ ಬರುತ್ತವೆ. ಇಲ್ಲಿ ರಫ್ತು ಮಾಡುವಷ್ಟು ಪ್ರಮಾಣದಲ್ಲಿ ಬೆಳೆಯುವ ಏಕೈಕ ಉತ್ಪನ್ನವೆಂದರೆ ಬಾಳೆ ಹಣ್ಣು. ಇತ್ತೀಚಿನ ವರ್ಷಗಳಲ್ಲಿ ಟೊಮಾಟೊ ಕೂಡ ಪ್ರಮುಖ ಬೆಳೆ. ಜೊತೆಗೆ ಬಟಾಟೆ, ದ್ರಾಕ್ಷಿ ಹಾಗೂ ಇನ್ನೂ ಹಲವು ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ವಿಸ್ಕಿ, ಬೀರ್ ಮತ್ತಿತರ ಮಾದಕ ದೃವ್ಯ ತಯಾರಿಸುವ ಘಟಕಗಳು ಅಲ್ಲಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲದೇ, ಕೆನರಿ ಐಲ್ಯಾಂಡ್ ನ ಹೀಯರೊ ಮತ್ತು ಗೋಮೇರೋ ದ್ವೀಪಗಳಲ್ಲಿ ಚಿಕ್ಕ ಪುಟ್ಟ ಕಾಡುಗಳೂ ಇದ್ದು ಈ ಕಾಡುಗಳಲ್ಲಿ ಹಲವು ಜೀವ ವೈವಿಧ್ಯತೆಯನ್ನೂ ಕಾಣಬಹುದಾಗಿದೆ. ದಟ್ಟ ಹಸಿರು ಹಾಗೂ ವೈವಿದ್ಯಮಯ ಬಣ್ಣಗಳಿಂದ ಶೋಭಿಸುವ ಈ ಕಾಡುಗಳಲ್ಲಿ ಚಾರಣದ ವ್ಯವಸ್ಥೆಯೂ ಇದೆ. ಸಮುದ್ರ ದಡದ ಉದ್ದಕ್ಕೂ ಹಾಲಿಡೇ ಹೋಮ್ ಗಳು, ಹೊಟೇಲ್ ಗಳು, ರೆಸಾರ್ಟ್ ಗಳ ಸಾಲು ಹಾಗೂ ನಡುಗಡ್ಡೆಯ ಒಳಗೆ ಕಾಣಸಿಗುವುದು ಅಂಗಡಿಗಳು ಮತ್ತು ಮಾರುಕಟ್ಟೆಗಳು, ಇಲ್ಲಿಯ ನಿವಾಸಿಗಳ ಮನೆಗಳು, ರೇಸ್ಟೌರಂಟ್ ಗಳು ಹಾಗೂ ಪಬ್ ಗಳು. ಐಲಾಂಡ್ ಉದ್ದಕ್ಕೂ ನೋಡಸಿಗುವ ಸುಂದರ ರಸ್ತೆಗಳು, ಪುಟ್ಟ ಪುಟ್ಟ ಪಾರ್ಕ್ ಗಳು, ವ್ಯವಸ್ತಿತ ಮಾರುಕಟ್ಟೆಗಳು ಮತ್ತು ಸಾರಿಗೆ ವ್ಯವಸ್ತೆ ಅಚ್ಚುಕಟ್ಟುತನಕ್ಕೆ ಮಾದರಿ ಎನ್ನುವಂತಿವೆ. ಬೀಚ್ ಗಾಗಿ ಬಿಸಿಲಿಗಾಗಿ ಹಾತೊರೆಯುವ ಪಶ್ಚಿಮಾತ್ಯ ದೇಶಗಳ ಪ್ರವಾಸ ಪ್ರಿಯರಿಗೆ ವರ್ಷದಲ್ಲಿ 12 ತಿಂಗಳುಗಳೂ ಹಿತವಾದ ವಾತಾವರಣವಿರುವ ಈ ಕೆನರಿ ಐಲಾಂಡ್ಸ್ ಮೆಚ್ಚಿನ ತಾಣ. ಅಲ್ಲದೇ, ಸೀ ಡೈವಿಂಗ್, ಸರ್ಫಿಂಗ್, ಸೇಲಿಂಗ್, ವಿಂಡ್ ಸರ್ಫಿಂಗ್, ಸೀ ಸಫಾರಿ, ಬೊಟಿಂಗ್, ಪ್ಯಾರಾ ಗ್ಲೈಡಿಂಗ್, ಹೈಕಿಂಗ್, ಮೌಂಟೇನ್ ಬೈಕಿಂಗ್, ರಾಕ್ ಕ್ಳೈಂಬಿಂಗ್, ಸೈಕ್ಲಿಂಗ್ ಮುಂತಾದ ಹತ್ತು ಹಲವು ರೀತಿಯ ಸಾಹಸ ಕ್ರೀಡೆಗಳು, ಹಲವು ಬಗೆಯ ವಾಟರ್ ಗೇಮ್ಸ್, ವಾಟರ್ ಪಾರ್ಕ್ಸ್ ಗಳು ಪ್ರವಾಸಿಗರಿಗೆ ಬೋರ್ ಆಗದಂತೆ ಮನರಂಜನೆ ನೀಡುತ್ತವೆ. ಇಲ್ಲಿ ಬರುವ ಹೆಚ್ಚಿನ ಪ್ರವಾಸಿಗರು ಕನಿಷ್ಠ 8 ರಿಂದ 15 ದಿನಗಳವರೆಗೆ ಉಳಿಯುವ ಪ್ಲಾನ್ ಮಾಡಿಯೇ ಬರುತ್ತಾರೆ. ಅಷ್ಟು ದಿನಗಳು ಉಳಿದರೂ ಮರಳಿ ಹೊರಟು ನಿಂತಾಗ ಮುಂದೆ ಎಂದಾದರೂ ಮತ್ತೊಮ್ಮೆ ಬರಬೇಕು ಎಂದೆನಿಸುವಂತೆ ಮಾಡುವ ಈ ಕೆನರಿ ಐಲಾಂಡ್ ನ ಪ್ರವಾಸ ಮರೆಯಲಾರದ ಒಂದು ವಿಭಿನ್ನ ಅನುಭವ ನೀಡುವುದರಲ್ಲಿ ಸಂಶಯವಿಲ್ಲ.

 -- ಚೇತನಾ ನಂಜುಂಡ್ ಚಿತ್ರಗಳು : ನಂಜುಂಡ್ ಭಟ್

Friday, April 18, 2014

My Article in Vijaya Vani on 17th April 2014


http://epapervijayavani.in/Details.aspx?id=12977&boxid=153222511

 

Page -17

http://epapervijayavani.in/epapermain.aspx?queryed=9&eddate=4%2f17%2f2014 

 

ಏನಿದು ‘ಈಸ್ಟರ್ ಎಗ್ ಹಂಟ್’? – ಈಸ್ಟರ್ ಹಬ್ಬದ ಮನೆಯೊಳಗೊಂದಿಷ್ಟು  ಹೊತ್ತು.
ಜಗತ್ತಿನ ಹಲವು ಭಾಗಗಳಲ್ಲಿ ಈಗ ಈಸ್ಟರ್ ಸಂಭ್ರಮ. ನಾವಿರುವ ಈ ಲಂಡನ್ ನಗರದಲ್ಲಂತೂ ಮಾರ್ಕೆಟ್ ಗಳಲ್ಲಿ ಶಾಪ್ ಗಳಲ್ಲಿ ಎಲ್ಲೆಡೆಯೂ ಈಸ್ಟರ್ ಎಗ್ಸ್(ಮೊಟ್ಟೆ), ಈಸ್ಟರ್ ಬನ್ನಿ(ಮೊಲ) ಗಳದೇ ಕಾರುಬಾರು. ಬಣ್ಣ ಬಣ್ಣದ ಪೇಪರ್ ಗಳಿಂದ ಪೇಯಿಂಟ್ ಗಳಿಂದ ಅಲಂಕರಿಸಿಕೊಂಡ ಎಗ್ ಗಳು, ಎಗ್ ಬಾಸ್ಕೆಟ್ ಗಳು, ಈಸ್ಟರ್ ಬನ್ನಿಗಳು ಶಾಪ್ ಗಳ ಮುಂದೆಯೇ ಬಂದು ಕುಳಿತು ಕಣ್ಣು ಮಿಟುಕಿಸುತ್ತವೆ. ಮಕ್ಕಳಿರಲಿ ಹಿರಿಯರಿರಲಿ ತಮ್ಮಡೆಗೆ ಒಂದು ನೋಟ ಬೀರದೆ ಮುಂದೆ ಹೋಗದಂತೆ ತಡೆದು ಮಕ್ಕಳಲ್ಲಿ ಆಸೆ ಮೂಡಿಸಿ ಅಲ್ಲಿಯೇ ವ್ಯಾಪಾರ ಕುದುರುತ್ತಲೇ ಮಕ್ಕಳ ಮುಖದ ಮಿನುಗುವ ನಗೆಯಲ್ಲಿ ತಮ್ಮ ಬಣ್ಣ ಬೆರೆಸುತ್ತವೆ.  ಶಾಪ್ ಗಳಲ್ಲಿ ಸಿಗುವ ಈ ಚಂದ ಚಂದವಾಗಿ ಅಲಂಕೃತಗೊಂಡ ಎಗ್ ಗಳಲ್ಲಿರುವುದು ಹೆಚ್ಚಾಗಿ ಮಿಲ್ಕ್ ಚಾಕ್ಲೆಟ್ ಗಳು. ಹಿಂದಿನ ಕಾಲದಲ್ಲಿ ನಿಜವಾದ ಮೊಟ್ಟೆಗಳನ್ನೇ ಬಳಸಲಾಗುತ್ತಿತ್ತಾದರೂ ಈಗ ಎಲ್ಲೆಡೆ ಬಳಸಲ್ಪಡುವುದು ಚಾಕ್ಲೆಟ್ ಎಗ್ ಗಳೇ. ಮೊಟ್ಟೆಯ ಆಕಾರದಲ್ಲಿ ತಯಾರಿಸಲ್ಪಟ್ಟು ವಿಧ ವಿಧವಾಗಿ ಸಿಂಗರಿಸಲ್ಪಟ್ಟ ಈ ಚಾಕೋಲೇಟ್ ಗಳನ್ನು ಈಸ್ಟರ್ ಹಬ್ಬದ ದಿನ ಆಚರಿಸಲ್ಪಡುವ "ಎಗ್ ಹಂಟ್" (ಮೊಟ್ಟೆ ಹುಡುಕುವ ಆಟ) ಎಂಬ ಆಟಕ್ಕಾಗಿ ಬಳಸಲ್ಪಡುತ್ತವೆ. ಈಸ್ಟರ್ ಬನ್ನಿ(ಮೊಲ) ಈಸ್ಟರ್ ನ ಮುಂಚಿನ ರಾತ್ರಿಯೇ ಬಂದು ಮನೆಯೊಳಗೆ ಮತ್ತು ಗಾರ್ಡನ್ ಗಳಲ್ಲಿ ಬೇರೆ ಬೇರೆ ಕಡೆ ಹಲವು ಎಗ್ ಗಳನ್ನು ಅಡಗಿಸಿಟ್ಟಿದೆ ಎಂದು ಮಕ್ಕಳಿಗೆ ಕಥೆ ಹೇಳುತ್ತಾ ಹಬ್ಬದ ದಿನ ಬೆಳಿಗ್ಗೆ ಆ ಎಗ್ ಗಳನ್ನು ಹುಡುಕಲು ಹೇಳುತ್ತಾರೆ. ಯಾರು ಅತೀ ಹೆಚ್ಚು ಎಗ್ ಗಳನ್ನು ಹುಡುಕಿ ತರುತ್ತಾರೋ ಅವರಿಗೆ ಗಿಫ್ಟ್. ಜೊತೆಗೆ ಆ ಎಗ್ ಗಳಲ್ಲಿರುವ ಚಾಕ್ಲೆಟ್ ಗಳನ್ನು ತಿನ್ನುವುದೇ ಮಕ್ಕಳಿಗೆ ಒಂದು ಮಜಾ. ಶಾಲೆಗಳಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಕೂಡ ಈಸ್ಟರ್ ನ ಪ್ರಯುಕ್ತವಾಗಿ ಈ ಎಗ್ ಹಂಟ್ ಆಟವನ್ನು ಏರ್ಪಡಿಸುತ್ತವೆ. ಎಗ್ ಹಂಟ್ ಆಟವಷ್ಟೇ ಅಲ್ಲದೇ ಎಗ್ ರೋಲ್ಲಿಂಗ್, egg tapping ಹೀಗೆ ಎಗ್ ಗಳನ್ನೊಳಗೊಂಡ ಇನ್ನೂ ಹಲವು ಆಟಗಳು ಈಸ್ಟರ್ ನಲ್ಲಿ ಆಡಲ್ಪಡುತ್ತವೆ.
ಈ ಈಸ್ಟರ್ ಬನ್ನಿ, ಎಗ್ ಹಂಟ್ ನ  ಆಟ ಈಸ್ಟರ್ ಹಬ್ಬದ ಆಚರಣೆಯಲ್ಲಿ ಹೇಗೆ ಮತ್ತು ಯಾಕೆ ಬಂತು ಎಂಬುದರ ಬಗ್ಗೆ ಬೇರೆ ಬೇರೆಯದೇ ಆದ ಹಲವು ನಂಬಿಕೆಗಳಿವೆ. ಬೇರೆ ಬೇರೆ ಕಥೆಗಳಲ್ಲಿ ಬೇರೆ ಬೇರೆಯೇ ದೃಷ್ಟಿಕೋನದಿಂದ ಇವುಗಳ ಬಳಕೆಯನ್ನು ನೋಡಲಾಗಿದೆ. ಒಂದು ನಂಬಿಕೆಯ ಪ್ರಕಾರ ಎಗ್ ನ್ನು ಜೀವೋತ್ಪತ್ತಿಯ ಸಂಕೇತವಾಗಿ ಹಾಗೂ ಮೊಲವನ್ನು ವಸಂತದ ಹೊಸ ಚಿಗುರಿನ ಉತ್ಸಾಹದ ಪ್ರತೀಕವಾಗಿ ಈ ಹಬ್ಬದಲ್ಲಿ ಗುರುತಿಸಿಕೊಂಡಿವೆ ಎನ್ನುತ್ತಾರೆ. ಇದರಲ್ಲೇ ಇನ್ನೊಂದು ನಂಬಿಕೆಯೆಂದರೆ ಜೀಸಸ್ ಕ್ರೈಸ್ಟ್ ಅವರು ಶಿಲುಬೆಗೇರಿಸಿದ ನಂತರ ತಮ್ಮ ದೇಹಕ್ಕೆ ಮರಳಿ ಬಂದು ಮರು ಜನ್ಮ ಪಡೆದುದರ ಪ್ರತೀಕವಾಗಿ ಆಚರಿಸಲ್ಪಡುವ ಈ ಹಬ್ಬದಲ್ಲಿ ಜೀವೋತ್ಥಾನದ ಸಂಕೇತವಾಗಿ ಮೊಟ್ಟೆಯನ್ನು ಈ ಹಬ್ಬದಲ್ಲಿ ಬಳಸಲಾಗುತ್ತದೆ ಎಂಬುದು. ಇನ್ನೊಂದು ನಂಬಿಕೆಯ ಪ್ರಕಾರ ಜೀಸಸ್ ರ ಮೃತದೇಹವನ್ನು ಒಂದು ಗುಹೆಯಲ್ಲಿ ಇಡಲಾಗಿತ್ತು. ಆದರೆ ಮರುದಿನ ಜೀಸಸ್ ರು ಮತ್ತೆ ದೇಹ ಪ್ರವೇಶಿಸಿ ಅಲ್ಲಿಂದ ಹೊರಟು ಹೋಗಿದ್ದು ಆ ಗುಹೆಯೊಳಗಿಂದ ಅವರ ದೇಹ ಕಾಣದಾಗಿ ಖಾಲಿಯಾದ ಗುಹೆ ಕಾಣಿಸಿದ್ದರಿಂದ ಈ ಎಗ್ ನ್ನು ಖಾಲಿ ಗುಹೆಗೆ ಹೋಲಿಸಿ ಈಸ್ಟರ್ ಹಬ್ಬಗಳಲ್ಲಿ ಬಳಸಲಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗೆಯೇ ಮೊಲದ ಬಗೆಗಿರುವ ಕತೆಯೆಂದರೆ ಜೀಸಸ್ ರ ಗೆಳೆಯನಾಗಿದ್ದ ಒಂದು ಪುಟ್ಟ ಮೊಲ ಅವರನ್ನು ಶಿಲುಬೆಗೇರಿಸಿದ ವಿಷಯ ತಿಳಿಯದೆ ಅವರಿಗಾಗಿ ಮೂರು ದಿನಗಳ ಕಾಲ ಕಾಯುತ್ತಿತ್ತು. ಈಸ್ಟರ್ ನ ದಿನ ಬೆಳಿಗ್ಗೆ ಜೀಸಸ್ ರು ಮತ್ತೆ ಜೀವ ತಳೆದು ಕಾಯುತ್ತಿದ್ದ ಮೊಲವನ್ನು ನೋಡಲು ಹೂದೋಟಕ್ಕೆ ಹೋದರು. ಜೀಸಸ್ ರ ಶಿಷ್ಯರು ಬಂದು ನೋಡಿದಾಗ ಅವರು ತಮ್ಮ ಮೊಲದ ಜೊತೆಗೆ ನಡೆದಲ್ಲೆಲ್ಲಾ ಮೊಲದ ಆಕಾರ ಹೋಲುವ ಹೂಗಳು ಅರಳಿದ್ದವು ಎಂಬುದು. ಹಾಗಾಗಿ ಜೀಸಸ್ ರು ಮರು ಜನ್ಮ ಪಡೆದ ದಿನದ ಈ ಹಬ್ಬದಲ್ಲಿ ಮೊಲ ಅಂದರೆ ಈಸ್ಟರ್ ಬನ್ನಿ ಮಕ್ಕಳಿಗೆಲ್ಲರಿಗೂ ಚಾಕೋಲೇಟ್ ಹಾಗೂ ಸಿಹಿ ಹಂಚುವುದು ಎಂಬ ಕಥೆಯೂ ಇದೆ.
ಈಸ್ಟರ್ ಹಬ್ಬದ ಧಾರ್ಮಿಕ ಆಚರಣೆಗಳು
ಈಸ್ಟರ್ ಕ್ರೈಸ್ತರು ಆಚರಿಸುವ ಒಂದು ಪ್ರಮುಖ ಧಾರ್ಮಿಕ ಹಬ್ಬ. ಪ್ರತಿ ವರ್ಷ ಹೆಚ್ಚಾಗಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಆಚರಿಸಲ್ಪಡುವ ಈಸ್ಟರ್ ಕ್ರೈಸ್ತರ ಆರಾದ್ಯ ದೈವ ಜೀಸಸ್ ರ ಪುನರುತ್ಥಾನದ ದ್ಯೋತಕವಾಗಿ ಜಗತ್ತಿನಾದ್ಯಂತ ಆಚರಿಸಲ್ಪಡುತ್ತದೆ. ಜೀಸಸ್ ರ ಪುನರುತ್ಥಾನ ಕ್ರೈಸ್ತ ಧರ್ಮದ ಧಾರ್ಮಿಕ ಕಥೆಯಲ್ಲಿ ಬಹಳ ಪ್ರಮುಖ ಘಟನೆ. ಜೀಸಸ್ ರಿಗೆ ಮರಣ ದಂಡನೆ ವಿಧಿಸಿ ಶಿಲುಬೆಗೇರಿಸಿದ ನಂತರ ಅವರು ತಮ್ಮ ಶರೀರವನ್ನು ತೊರೆದರೂ ಇದಾದ ನಂತರದ ಮೂರನೆಯ ದಿನ ಅವರು ತಮ್ಮ ಶರೀರಕ್ಕೆ ಮರಳಿ ಬಂದು ಮರುಜೀವನ ಹೊಂದಿದ ಸಂಭ್ರಮಕ್ಕಾಗಿ ಅವರು ಮತ್ತೆ ಜೀವ ತಳೆದ ದಿನವನ್ನು ಈಸ್ಟರ್ ಹಬ್ಬವಾಗಿ ಆಚರಿಸಲಾಗುತ್ತದೆ ಎಂಬುದು ಈಸ್ಟರ್ ಆಚರಣೆಯ ಹಿಂದಿನ ಕಥೆ. ಗುಡ್ ಫ್ರೈಡೆ ಎಂದು ಆಚರಿಸಲಾಗುತ್ತಿರುವುದು ಜೀಸಸ್ ರನ್ನು ಶಿಲುಬೇಗಿರಿಸಿದ ದಿನ. ಅಂದರೆ ಈಸ್ಟರ್ ಹಬ್ಬದ ಮುಂಚಿನ ಶುಕ್ರವಾರವನ್ನು ಗುಡ್ ಫ್ರೈಡೆ ಯಾಗಿ ಆಚರಿಸುತ್ತಾರೆ. ಶುಕ್ರವಾರದಂದು ಶಿಲುಬೇಗೆರಿಸಲ್ಪಟ್ಟು ದೇಹ ತ್ಯಜಿಸಿದ ಜೀಸಸ್ ರು ಭಾನುವಾರದಂದು ಮತ್ತೆ ದೇಹಕ್ಕೆ ಮರಳುತ್ತಾರೆ. ಹಾಗಾಗಿ ಈಸ್ಟರ್ ಸದಾ ಭಾನುವಾರದಂದು ಆಚರಿಸಲ್ಪಡುತ್ತದೆ.
ಈಸ್ಟರ್ ಹಬ್ಬಕ್ಕೆ ಮುಂಚೆ ನಲವತ್ತು ದಿನಗಳು ಅಂದರೆ ಸುಮಾರು ಆರು ವಾರಗಳ ಕಾಲ “ಲೆಂಟ್ ಅಥವಾ ಗ್ರೇಟ್ ಲೆಂಟ್” ಎಂದು ಆಚರಿಸಲಾಗುತ್ತದೆ. ಈ ಅವಧಿಯ ಮುಖ್ಯ ಆಚರಣೆ ಉಪವಾಸ ಹಾಗೂ ಪ್ರಾರ್ಥನೆ. ಕೆಲವು ಆಹಾರಗಳನ್ನು ಅಂದರೆ ಮೊಟ್ಟೆ, ಮಾಂಸ, ಎಣ್ಣೆ, ಮಾದಕ ದ್ರವ್ಯಗಳು ಹಾಗೂ ಹೈನು ಪದಾರ್ಥಗಳನ್ನು ಅಂದರೆ ಡೈರಿ ಉತ್ಪನ್ನಗಳನ್ನು ವರ್ಜಿಸಲಾಗುತ್ತದೆ. ಈ ಆಚರಣೆಯ ಉದ್ದೇಶ ಜೀಸಸ್ ರ ತ್ಯಾಗಕ್ಕೆ ಗೌರವ ಸಲ್ಲಿಸುವುದಷ್ಟೇ ಅಲ್ಲ ಮನುಷ್ಯರು ತಮ್ಮನ್ನು ತಾವು ಪರೀಕ್ಷೆಗೊಳಪಡಿಸಿಕೊಳ್ಳುವ ಮೂಲಕ, ಪ್ರಾರ್ಥನೆಯ ಮೂಲಕ ತಮ್ಮನ್ನು ತಾವು ಉತ್ತಮಗೊಳಿಸಿಕೊಳ್ಳಲು ಪ್ರೇರೇಪಿಸುತ್ತದೆ ಈ ಲೆಂಟ್ ಆಚರಣೆ ಎಂದು ಕ್ರೈಸ್ತ ಧರ್ಮದ ಪುರಾಣ ಕಥೆಗಳು ಹೇಳುತ್ತವೆ. ಹಾಗಾಗಿ ಈ ಅವಧಿಯಲ್ಲಿ ಜನರು ದೇವರ ಪ್ರಾರ್ಥನೆ, ಧ್ಯಾನ, ಪವಿತ್ರ ಗ್ರಂಥಗಳ ಪಠಣ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಈ ಗ್ರೇಟ್ ಲೆಂಟ್ ನ್ನು ಆಚರಿಸುತ್ತಾರೆ. ಅಷ್ಟೇ ಅಲ್ಲದೇ, ತಮ್ಮನ್ನು ತಾವು ದೇವರಲ್ಲಿ ಸಂಪೂರ್ಣ ಶರಣಾಗತರಾಗಿ, ತಪ್ಪೊಪ್ಪಿಗೆ ಮಾಡಿಕೊಳ್ಳುವುದು, ತಾವು ಮಾಡಿದ ಯಾವುದೇ ತಪ್ಪುಗಳಿಗೆ ಪಶ್ಚಾತ್ತಾಪ ಪಡುವುದು, ತಮ್ಮಿಂದ ಎಸಗಲ್ಪಟ್ಟ ತಪ್ಪನ್ನು ಸರಿ ಪಡಿಸಲು ಕೋರಿಕೊಳ್ಳುವುದು ಈ ಎಲ್ಲಾ ಸದಾಚಾರಗಳನ್ನು ಪ್ರೇರೇಪಿಸುತ್ತದೆ ಈ ಲೆಂಟ್ ಆಚರಣೆ. ಈ ಲೆಂಟ್ ಆಚರಣೆ ಈಸ್ಟರ್ ನ ಮುಂಚಿನ ಪವಿತ್ರ ಗುರುವಾರದಂದು ಮುಕ್ತಾಯಗೊಳ್ಳುತ್ತದೆ. ಜೀಸಸ್ ರು ಶಿಲುಬೇಗೆರುವ ಮುನ್ನ ಕೊನೆಯ ಊಟ ಮಾಡಿದ್ದು ಗುರುವಾರವಾದ್ದರಿಂದ ಈಸ್ಟರ್ ಹಬ್ಬದ ಮುಂಚಿನ ಗುರುವಾರವನ್ನು ಪವಿತ್ರ ಗುರುವಾರ(Holy Thursday) ಎಂಬ ಹೆಸರಿನಿಂದ ಆಚರಿಸುತ್ತಾರೆ. ಈಸ್ಟರ್ ಹಬ್ಬದಲ್ಲಿ ಆಚರಿಸಲ್ಪಡುವ ಮೂರು ಪ್ರಮುಖ ದಿನಗಳು ಹೋಲಿ ಥರ್ಸ್ ಡೇ, ಗುಡ್ ಫ್ರೈಡೆ, ಹಾಗೂ ಈಸ್ಟರ್ ಸಂಡೇ. ಗುಡ್ ಫ್ರೈಡೆಯಂದು ಜೀಸಸ್ ರನ್ನು ಶಿಲುಬೆಗೇರಿಸಿದ ದಿನವೆಂದು ಚರ್ಚ್ ಗಳಲ್ಲಿ ಶೋಕಾಚರಣೆ ನಡೆಯುತ್ತದೆ. ಮರುದಿನ ಪವಿತ್ರ ಶನಿವಾರದಂದು ರಾತ್ರಿ ಜಾಗರಣೆ ಮಾಡಿ ಕ್ಯಾಂಡಲ್ ಗಳನ್ನು ಉರಿಸಲಾಗುತ್ತದೆ. ಅಂದರೆ ಹೊಸಬೆಳಕು ಮೂಡುವ ಧ್ಯೋತಕವಾಗಿ ದೀಪ ಬೆಳಗಲಾಗುತ್ತದೆ. ಹಲವು ಪ್ರಾದೇಶಿಕ ಆಚರಣೆಗಳಲ್ಲಿ ಈಸ್ಟರ್ ಮುಂಚಿನ ದಿನವಾದ ಶನಿವಾರದಂದು ತಮ್ಮ ಪೂರ್ವಜರ ಬಂಧು ಬಳಗದವರ ಹಾಗೂ ಸ್ನೇಹಿತರ ಸಮಾಧಿಗಳಿಗೆ ಹೂಗಳಿಂದ ಅಲಂಕರಿಸಿ ಪೂಜೆ ನಡೆಸುವ ಸಂಪ್ರದಾಯವೂ ಇದೆ. ಶನಿವಾರ ರಾತ್ರಿಯ ಜಾಗರಣೆ ಮಾಡಿ ಭಾನುವಾರ ಸೂರ್ಯೋದಯಕ್ಕೂ ಮುನ್ನ ‘ಸನ್ ರೈಸ್ ಸರ್ವಿಸ್’ ಎಂದು ಮುಂಜಾನೆಯೇ ಚರ್ಚ್ ಗಳಲ್ಲಿ ಪ್ರಾರ್ಥನೆ ನಡೆಸಲಾಗುತ್ತದೆ. ಸೂರ್ಯೋದಯಕ್ಕೂ ಮುನ್ನವೇ ಚರ್ಚ್ ನಲ್ಲಿ ಸೇರುವ ಜನಸಮೂಹ ಈಸ್ಟರ್ ಸಂಡೆಯ ಸೂರ್ಯೋದಯವನ್ನು  ಭಕ್ತಿ ಸಂಭ್ರಮಗಳಿಂದ ವೀಕ್ಷಿಸುತ್ತಾ ವಿಶೇಷ ಪ್ರಾರ್ಥನೆ  ಸಲ್ಲಿಸುತ್ತಾರೆ. ಈಸ್ಟರ್ ಸಂಡೆ ಯ ದಿನ ಚರ್ಚ್ ಗಳಲ್ಲಿ ಮೆರವಣಿಗೆ ನಡೆಯುತ್ತದೆ. ಜೀಸಸ್ ರ ದೇಹ ಹುಡುಕುವ ದ್ಯೋತಕವಾಗಿ ನಡೆಯುವ ಈ ಮೆರವಣಿಗೆ ಜೀಸಸ್ ರು ಮತ್ತೆ ತಮ್ಮ ದೇಹಕ್ಕೆ ಹಿಂದಿರುಗಿ ಪುನರ್ಜೀವನ ಹೊಂದಿದರು ಎಂಬ ಉದ್ಘೋಷದೊಂದಿಗೆ ಮೆರವಣಿಗೆ ಮುಕ್ತಾಯಗೊಳ್ಳುತ್ತದೆ. ಹಾಗೆಯೇ ಚರ್ಚ್ ಗಳಲ್ಲಿ ಹೂಗಳನ್ನು ಸಲ್ಲಿಸುವ ಮೂಲಕ ಮೋಂಬತ್ತಿ ಬೆಳಗುವುದರ ಮೂಲಕ ಜೀಸಸ್ ರ ಮರು ಹುಟ್ಟನ್ನು ಆಚರಿಸಲಾಗುತ್ತದೆ. ಮನೆಗಳಲ್ಲಿ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ತಯಾರಿಸಿಕೊಂಡು ಬಂಧು ಮಿತ್ರರೊಡನೆ ಹಬ್ಬದ ಊಟ ಮಾಡುವ ಮೂಲಕ ಈಸ್ಟರ್ ಹಬ್ಬ ಮುಕ್ತಾಯಗೊಳ್ಳುತ್ತದೆ.
ವಸಂತದ ಶುರುವಿನಲ್ಲಿ ಆಚರಿಸಲ್ಪಡುವ ಈ ಹಬ್ಬಕ್ಕೆ ಗಿಡ ಮರಗಳಲ್ಲಿ ಆಗಷ್ಟೇ ಮೂಡುತ್ತಿರುವ ಹೊಸ ಚಿಗುರು, ಹೂ ಮೊಗ್ಗುಗಳು ಹಣ್ಣು ಹಂಪಲುಗಳು ಈ ಹಬ್ಬದ ಆಚರಣೆಯ ಹಿಂದಿನ 'ಹೊಸ ಹುಟ್ಟು ಹೊಸ ಜೀವನ' ಎಂಬ ನಂಬಿಕೆಗೆ ಪೂರಕವಾಗಿ ಸುತ್ತಲಿನ ಪರಿಸರದ ತುಂಬೆಲ್ಲಾ ಹೊಸ ಜೀವನದ ಹೊಸ ಹುರುಪಿನ ಚಿತ್ರಣ ನೀಡುವುದು ಒಂದು ವೈಶಿಷ್ಟ್ಯ ಎಂದರೆ ತಪ್ಪಾಗಲಾರದೇನೋ.
---ಚೇತನಾ ನಂಜುಂಡ್, ಲಂಡನ್

 

Tuesday, November 5, 2013

ಡಿಸ್ನಿ ಲ್ಯಾಂಡ್ ಬಗ್ಗೆ ನನ್ನದೊಂದು ಬರಹ ವಿಜಯ ಕರ್ನಾಟಕದಲ್ಲಿ



 ಪ್ಯಾರಿಸ್‌ನ ಮೋಹಕ ಡಿಸ್ನಿಲ್ಯಾಂಡ್‌

Tuesday, June 4, 2013

ಟಿಬೆಟ್ ನಲ್ಲಿ ಸಿದ್ದಗೊಳ್ಳುತ್ತಿರುವ ಏಷ್ಯಾದ ಅತೀ ದೊಡ್ಡ ಬಾಹ್ಯಾಕಾಶ ವೀಕ್ಷಣಾಲಯ



ಏಷ್ಯಾದ ಬಾಹ್ಯಾಕಾಶ ವಿಜ್ನಾನಿಗಳ ಬಹುದಿನಗಳ ಕನಸು ನನಸಾಗುವ ಸೂಚನೆಗಳು ಕಂಡುಬರುತ್ತಿವೆ. ಎತ್ತರದ ಪರ್ವತ ಶಿಖರದಲ್ಲಿ ಒಂದು ಅತ್ಯಾಧುನಿಕ ಹಾಗೂ ಉತ್ಕೃಷ್ಟ ಮಟ್ಟದ ಒಂದು ಅಂತರಿಕ್ಷ ವೀಕ್ಷಣಾಲಯವನ್ನು ಹೊಂದುವ ಮಹತ್ವಾಕಾಂಕ್ಷೆ ಈಡೇರುವ ಲಕ್ಷಣಗಳು ಕಂಡುಬರುತ್ತಿದೆ. ಪ್ರಶಸ್ತ ಸ್ಥಳಕ್ಕಾಗಿ 2 ದಶಕಗಳ ಸತತ ಹುಡುಕಾಟದ ನಂತರ ಎಲ್ಲಾ ರೀತಿಯಲ್ಲೂ ಸರಿಹೊಂದುವ ಒಂದು ಪ್ರದೇಶವನ್ನು ಅಂತರ್ರಾಷ್ಟ್ರೀಯ ಬಾಹ್ಯಾಕಾಶ ವೀಕ್ಷಣಾಲಯಕ್ಕಾಗಿ  ಪರಿಗಣಿಸಲಾಗುತ್ತಿದೆ. ಟಿಬೆಟ್ ದೇಶದ ನೈರುತ್ಯ ಭಾಗದಲ್ಲಿರುವ ಅತಿ ಎತ್ತರದ ನಗರಿಎಂಬ ಪರ್ವತವನ್ನು ಬಾಹ್ಯಾಕಾಶ ವೀಕ್ಷಣಾಲಯವನ್ನು ನಿರ್ಮಿಸಲು ಸೂಕ್ತ ಪ್ರದೇಶ ಎಂದು ವಿಜ್ನಾನಿಗಳು ಪರಿಗಣಿಸಿದ್ದಾರೆ. ಕಾಶ್ಮೀರ ಪರ್ವತ ಶ್ರೇಣಿಗಳ ಗಡಿಯಲ್ಲಿರುವ ಈ ನಗರಿಎಂಬ ಪರ್ವತ ಸಮುದ್ರ ಮಟ್ಟದಿಂದ 5100 ಮೀಟರ್ ಎತ್ತರದಲ್ಲಿದೆ. ನಗರಿ ಪರ್ವತದ ಶಿಂಕ್ವಾನ್ನೆ ಎಂಬ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ವೀಕ್ಷಣಾಲಯ ಜಗತ್ತಿನ ಅತ್ಯಂತ ಎತ್ತರದ ವೀಕ್ಷಣಾಲಯವಾಗಲಿದೆ. ಜಗತ್ತಿನ ಅತ್ಯಂತ ಉತ್ಕ್ರಷ್ಟ, ಅತ್ಯಾಧುನಿಕ ಹಾಗೂ ಅತಿ ಎತ್ತರದ ವೀಕ್ಷಣಾಲಯಗಳಾದ ಅಮೆರಿಕಾದ ಹವಾಯಿ ಪ್ರದೇಶದ ಮೌನಾ ಕೀಯಾ ವೀಕ್ಷಣಾಲಯ ಹಾಗೂ ಚೈಲ್ ದೇಶದ ಅಟಕಾಮಾ ಮರುಭೂಮಿಯಲ್ಲಿರುವ ವೀಕ್ಷಣಾಲಯ ಮತ್ತು ಸ್ಪೈನ್ ನ ಕ್ಯಾನರಿ ಐಲಾಂಡ್  ವೀಕ್ಷಣಾಲಯಗಳ ಸಾಲಿಗೆ ಈಗ ಏಷ್ಯದಲ್ಲಿ ನಿರ್ಮಿಸಲು ಯೋಜಿಸುತ್ತಿರುವ ಈ ಶಿಂಕ್ವಾನ್ನೆ ವೀಕ್ಷಣಾಲಯ ಕೂಡ ಸೇರಲಿದೆ ಎಂದು ಬಾಹ್ಯಾಕಾಶ ವಿಜ್ನಾನಿಗಳು ಅಭಿಪ್ರಾಯಪಡುತ್ತಿದ್ದಾರೆ.  ಆದರೆ ಈ ಶಿಂಕ್ವಾನ್ನೆ ವೀಕ್ಷಣಾಲಯದ ನಿರ್ಮಾಣ ಪ್ರಾರಂಭವಾಗಲು ಇನ್ನೂ ಒಂದು ಅಂತಿಮ ಮಟ್ಟದ ಸ್ಥಳ ಪರೀಕ್ಷೆಗಳು ನಡೆಯಬೇಕಿದೆ. ಈ ವರ್ಷ ಶುರುವಾಗಲಿರುವ ಅತಿ ಪ್ರಮುಖ ಹಾಗೂ ಅಂತಿಮ ಮಟ್ಟದ ಪರೀಕ್ಷೆಯಲ್ಲಿ ವಿಜ್ನಾನಿಗಳು ಸತತವಾಗಿ ಈ ಪ್ರದೇಶದ ವಾತಾವರಣದ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ ಹಾಗೂ ಪ್ರಯೋಗಾತ್ಮಕವಾಗಿ ಟೆಲಿಸ್ಕೋಪ್ ವೀಕ್ಷಣೆ ನಡೆಸಲಿದ್ದಾರೆ. ಚೀನಾದ ಬಾಹ್ಯಾಕಾಶ ವಿಜ್ನಾನಿಗಳು ಇನ್ನೂ ಒಂದು ಹಂತ ಮುಂದುವರೆದು ಈ  ಶಿಂಕ್ವಾನ್ನೆ ವೀಕ್ಷಣಾಲಯಕ್ಕಾಗಿ ಎರಡು ಮೇಗಾಫೆಸಿಲಿಟಿಗಳನ್ನು ತಯಾರಿಸುವ ಯೋಜನೆಯಲ್ಲಿ ನಿರತರಾಗಿದ್ದಾರೆ. ಅದೇನೆಂದರೆ ಯುರೋಪ್ಸ್ ಎಕ್ಸ್ಟ್ರೀಮ್ಲಿ ಲಾರ್ಜ್ ಟೆಲಿಸ್ಕೋಪ್(ELT)  ಎಂಬ ಜಗತ್ತಿನ ಅತಿ ದೊಡ್ಡ ಟೆಲಿಸ್ಕೋಪ್ ಗೆ ಸರಿಸಮನಾದ ಟೆಲಿಸ್ಕೋಪ್ ನ ತಯಾರಿಕೆಯ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ. ಅದಲ್ಲದೇ, ಲಾರ್ಜ್ ಸ್ಕೈ ಏರಿಯಾ ಮಲ್ಟಿ ಒಬ್ಜೆಕ್ಟ್ ಫೈಬರ್ ಸ್ಪೆಕ್ಟ್ರೋಸ್ಕೋಪಿಕ್ ಟೆಲಿಸ್ಕೋಪ್ (LAMOST) ಎಂಬ ಉಪಕರಣದ ಯೋಜನೆ ಸಿದ್ದಪಡಿಸುತ್ತಿದ್ದಾರೆ. ಈ ಎಲ್ಲ ಅತ್ಯಾಧುನಿಕ ಪರಿಕರಣಗಳಿಂದ ಸಿದ್ದಗೊಳ್ಳುವ ಈ ವೀಕ್ಷಣಾಲಯ ಏಷ್ಯಾದ ಅತಿ ದೊಡ್ಡ ವೀಕ್ಷಣಾಲಯವಷ್ಟೇ ಅಲ್ಲದೇ ಇತರ ಅಂತರ್ರಾಷ್ಟ್ರೀಯ ವೀಕ್ಷಣಾಲಯಗಳ ಮಾದರಿಗೆ ಸೇರಲಿದೆ.
ಜಗತ್ತಿನ ಅತ್ಯುನ್ನತ ಬಾಹ್ಯಾಕಾಶ ವೀಕ್ಷಣಾಲಯಗಳ ಮಾದರಿಯಲ್ಲೇ ಏಷ್ಯಾದಲ್ಲೊಂದು ವೀಕ್ಷಣಾಲಯ ಸ್ಥಾಪಿಸಬೇಕೆಂಬ ಉದ್ದೇಶದಿಂದ ಪ್ರಶಸ್ತ ಸ್ಥಳಕ್ಕಾಗಿ 1993 ರಲ್ಲಿ ಹುಡುಕಾಟ ಶುರುವಾಯ್ತು.  ಚೀನಾದ ನಾಂಜಿಂಗ್ ಎಂಬ ಪ್ರದೇಶದಲ್ಲಿರುವ ಪರ್ಪಲ್ ಮೌಂಟೇನ್ ಒಬ್ಸರ್ವೇಟರಿ ಎಂಬ ವೀಕ್ಷಣಾಲಯದ ಲಿಯೂ ಕೈಪಿನ್ ಎಂಬ ಬಾಹ್ಯಾಕಾಶ ವಿಜ್ನಾನಿಯ ನೇತ್ರತ್ವದಲ್ಲಿ ಶುರುವಾದ ಈ ಸ್ಥಳ ಪರೀಕ್ಷಣೆ ಈ ಮಹಾತ್ವಾಕಾಂಕ್ಷಿ ಯೋಜನೆಗೆ ಮುನ್ನುಡಿಯಾಯಿತು. ಪ್ರಾರಂಭದಲ್ಲಿ ಚೈನಾ ಹಾಗೂ ಟಿಬೆಟ್ ಗಡಿಭಾಗದಲ್ಲಿರುವ ಕ್ವಿಂಗೈ-ಟಿಬೇಟಿಯನ್ ಪರ್ವತ ಪ್ರದೇಶಗಳಲ್ಲಿ ಸ್ಥಳ ಸಮೀಕ್ಷೆ ನಡೆಸಲ್ಪಟ್ಟಿತು. ಆದರೆ ಈ ಪ್ರದೇಶ ಅಂತರ್ರಾಷ್ಟ್ರೀಯ ವೀಕ್ಷಣಾಲಯಕ್ಕೆ ಸರಿ ಹೊಂದದೇ ಪ್ರತಿಕೂಲ ವಾತಾವರಣ ಕಂಡುಬಂದಿದ್ದರಿಂದ ವಿಜ್ನಾನಿಗಳ ತಂಡಕ್ಕೆ ಅತೀವ ನಿರಾಶೆಯಾಯ್ತು. ನಂತರ 2000 ನೇ ಇಸವಿಯಲ್ಲಿ ಟಿಬೆಟ್ ನ ದಕ್ಷಿಣ ಭಾಗದಲ್ಲಿರುವ ಟಿಂಗ್ರಿ ಎಂಬ ಪರ್ವತದಲ್ಲಿ ಸ್ಥಳ ಪರೀಕ್ಷೆ ನಡೆಸಿದಾಗಲೂ ಅಲ್ಲಿಯೂ ಕೂಡ ಪ್ರತಿಕೂಲಕರ ವಾತಾವರಣ ಕಂಡುಬಂದಿದ್ದರಿಂದ ವಿಜ್ನಾನಿಗಳ ತಂಡಕ್ಕೆ ಮತ್ತೊಮ್ಮೆ ನಿರಾಶೆಯಾಯ್ತು. ಚೀನಾ, ಜಪಾನ್, ಸೌತ್ ಕೊರಿಯಾ ಮತ್ತು ತೈವಾನ್ ದೇಶಗಳ ಸಹಯೋಗದಲ್ಲಿ ನಿಯೋಜಿಸಲಾದ ವಿಜ್ನಾನಿಗಳ ಟೀಮ್ ಗೆ ಸುಮಾರು ಒಂದು ದಶಕಗಳ ಕಾಲ ಹೇಳಿಕೊಳ್ಳುವಂತ ಯಾವುದೇ ಬೆಳವಣಿಗೆಯನ್ನು ಸಾಧಿಸಲಾಗಲಿಲ್ಲ. ಆದರೂ ಪ್ರಯತ್ನ ಬಿಡದ ಈ ಟೀಮ್ ಏಶಿಯಾದಲ್ಲಿ ಒಂದು ಅತ್ಯಾಧುನಿಕ ಬಾಹ್ಯಾಕಾಶ ವೀಕ್ಷಣಾಲಯದ ನಿರ್ಮಾಣಕ್ಕಾಗಿ ಪ್ರಶಸ್ತ ಸ್ಥಳದ ಹುಡುಕಾಟದಲ್ಲಿಯೇ ತೊಡಗಿಕೊಂಡಿತ್ತು. ಅಂತೂ 2005 ರ ವೇಳೆಗೆ ಟಿಬೆಟ್ ನ ಈ ನಗರಿ ಪ್ರರ್ವತ ಪ್ರದೇಶ ಪರೀಕ್ಷೆಗೆ ವಿಜ್ನಾನಿಗಳನ್ನು ನಿಯೋಜಿಸಿದರು. ಸ್ಥಳ ಪರೀಕ್ಷೆಯಲ್ಲಿ ನಾಲ್ಕು ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಯ್ತು. ಕ್ಲೌಡ್ ಕವರೇಜ್, ವಿಂಡ್ ಸ್ಪೀಡ್ ಅಂದರೆ ಗಾಳಿಯ ವೇಗ, ವಾಟರ್ ವೆಪೋರ್ ಹಾಗೂ ಟೆಲಿಸ್ಕೋಪ್ ನಿಂದ ಆಕಾಶ ವೀಕ್ಷಣೆಯಲ್ಲಿನ ಸ್ಪಷ್ಟತೆ ಇವುಗಳನ್ನು ಪ್ರಮುಖ ಮಾಪನಗಳನಾಗಿಟ್ಟುಕೊಂಡು ಸ್ಥಳ ಪರೀಕ್ಷಣೆ ಮಾಡಲಾಯ್ತು. ನಗರಿ ಪರ್ವತ ಪ್ರದೇಶದಲ್ಲಿ ಕೆಲಸಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಜನವಸತಿಯೇ ಇಲ್ಲದ ಆ ಪ್ರದೇಶದಲ್ಲಿ ಯಾವ ಮೂಲಭೂತ ಸೌಲಭ್ಯಗಳೂ ಇರಲಿಲ್ಲ. ಅಲ್ಲದೇ, ರಸ್ತೆಯೂ ಕೂಡ ಇಲ್ಲದಿದ್ದುದರಿಂದ ಆ ಪ್ರದೇಶವನ್ನು ತಲುಪಲು ಒಂದು ದಿನಕ್ಕೂ ಹೆಚ್ಚು ಸಮಯ ಹಿಡಿಯುತ್ತಿತ್ತು. ಅಲ್ಲದೇ, ಸಮುದ್ರ ಮಟ್ಟದಿಂದ ಅತಿ ಎತ್ತರದ ಪ್ರದೇಶವಾಗಿದ್ದುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿತ್ತು. ಅಲ್ಲಿ ಪ್ರಾಥಮಿಕ ಹಂತಗಳಲ್ಲಿ ಕೆಲಸ ಮಾಡಿದ ಹಾಗೂ ಸ್ಥಳ ಪರೀಕ್ಷೆಯಲ್ಲಿ ಪಾಲ್ಗೊಂಡ ಚೀನಾದ  ನ್ಯಾಷನಲ್ ಆಷ್ಟ್ರೋನೋಮಿಕಲ್ ಒಬ್ಸರ್ವೇಟರೀಸ್ ಆಫ್ ದ ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ನ ವಿಜ್ನಾನಿ ಯಾವೋ ಯಾಂಗ್ಕ್ವಿಯಾಂಗ್ ಹೇಳುವಂತೆ  ನಗರಿ ಪ್ರದೇಶಕ್ಕೆ ಹೋಗುವಾಗ ಕಾರಿನ ಒಂದೊಂದು ಟೈರ್ ನ್ನೂ 4-5 ಸಲ ಬದಲಿಸಬೇಕಾದ ಪರಿಸ್ತಿತಿ ಉಂಟಾಗುತ್ತಿತ್ತು. ಆದರೆ ಅಷ್ಟೆಲ್ಲ ಕಷ್ಟ ಪಟ್ಟು ನಡೆಸಿದ ಪರೀಕ್ಷಣೆ ವ್ಯರ್ಥವಾಗಲಿಲ್ಲ. 2007 ರ ವೇಳೆಗೆ  ಬಾಹ್ಯಾಕಾಶ ವೀಕ್ಷಣಾಲಯ ನಿರ್ಮಿಸಲು ನಗರಿ ತುಂಬಾ ಪ್ರಶಸ್ತ ಸ್ಥಳ ಎಂಬುದು ಖಚಿತವಾಗಿತ್ತು. 2007 ರಲ್ಲಿಯೇ ಸ್ಥಳ ನಿಗದಿಯಾದರೂ 2008 ರಲ್ಲಿ ಟಿಬೆಟ್ ನಲ್ಲಿ ಶುರುವಾದ ದಂಗೆಯಿಂದಾಗಿ ವೀಕ್ಷಣಾಲಯ ನಿರ್ಮಾಣದ ಮುಂದಿನ ಯೋಜನಾಕಾರ್ಯಗಳಿಗೆ ತೊಡಕು ಉಂಟಾಯ್ತು. ಅದೇ ವರ್ಷದ ಅಂತ್ಯದ ವೇಳೆಗೆ ಟಿಬೆಟ್ ನಲ್ಲಿ ಶಾಂತಿ ನೆಲೆಸಿದ ಮೇಲೆ ಮತ್ತೆ ಯೋಜನಾಕಾರ್ಯ ಶುರು ಮಾಡುವ ಹೊತ್ತಿಗೆ ಅಲ್ಲಿನ ಪರಿಸರವೂ ಕೂಡ ವಾಸ ಯೋಗ್ಯವಾಗಿ ಕೆಲಸ ಮಾಡಲು ಅನುಕೂಲಕರ ವಾತಾವರಣವೇರ್ಪಟ್ಟಿತ್ತು. 2010 ರಲ್ಲಿ ನಗರಿಯ ರಾಜಧಾನಿ ನಗರವಾದ ಶಿಂಕ್ವಾನ್ನೆ ಯಲ್ಲಿ ಒಂದು ವಿಮಾನ ನಿಲ್ದಾಣ ನಿರ್ಮಿಸಲಾಯ್ತು. ಇದರಿಂದಾಗಿ ಅಲ್ಲಿಗೆ ತಲುಪಲು ಮಾಡಬೇಕಾಗಿದ್ದ ಪರ್ವತಾರೋಹಣದ ಕಷ್ಟ ನಿವಾರಣೆಯಾಯ್ತು. ಹಾಗೆಯೇ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿ ವಿದ್ಯುತ್ ಸರಬರಾಜು ಮಾಡಿಕೊಳ್ಳಲು ಸಾಧ್ಯವಾಯ್ತು. ಸ್ಯಾಟಲೈಟ್ ಡಿಷ್ ಗಳನ್ನು ಅಳವಡಿಸಿ ದೂರವಾಣಿ ಸಂಪರ್ಕ ಏರ್ಪಡಿಸಿಕೊಳ್ಳಲಾಯ್ತು.
ನಗರಿಯಲ್ಲಿ ಕೈಗೊಂಡ ಪ್ರಾಥಮಿಕ ಪ್ರಯೋಗಗಳು ಮಿಶ್ರ ಫಲವನ್ನು ನೀಡಿವೆ. ಚೀನಾದ ವಿಜ್ನಾನಿ ಯಾವೋ ಪ್ರಕಾರ ಪ್ರಾಥಮಿಕವಾಗಿ ವಿಜ್ನಾನಿಗಳು ಅಂದುಕೊಂದಷ್ಟು  ಗಾಳಿಯ ಬಿರುಸು ಇಲ್ಲದಿರುವುದು ಸಮಾಧಾನಕರ ವಿಷಯ. ಆದರೆ ಮಾನ್ಸೂನ್ ನ ಸಮಯದಲ್ಲಿ ಹೆಚ್ಚಿನ ದಿನಗಳಲ್ಲಿ ಮೋಡ ಕವಿದಿರುವುದರಿಂದ ಬಾಹ್ಯಾಕಾಶ ವೀಕ್ಷಣೆಗೆ ಸಾಧ್ಯವಾಗುವುದಿಲ್ಲ. ಆದರೆ ಈ ತೊಡಕುಗಳನ್ನು ಬಿಟ್ಟರೆ ನಗರಿ ಅತ್ಯುತ್ತಮ ಬಾಹ್ಯಾಕಾಶ ವೀಕ್ಷಣಾಲಯವಾಗುವುದರಲ್ಲಿ ಸಂಶಯವಿಲ್ಲ ಎಂಬುದು ಇನ್ನೋರ್ವ ವಿಜ್ನಾನಿ ಕೈಫು ಅವರ ಅಭಿಪ್ರಾಯ. ವಿಜ್ನಾನಿ ಕೈಫು ಹೇಳುವಂತೆ ನಗರಿಯಲ್ಲಿ ನ ಟೆಲಿಸ್ಕೋಪ್ ಗಳು ಮೌನಾ ಕೀಯಾ ದಲ್ಲಿನ ಟೆಲಿಸ್ಕೋಪ್ ಗಿಂತ 30% ಹೆಚ್ಚು ಫೋಟೋನ್ ಗಳನ್ನು ಮಿಡಿಲ್ ಇನ್ಫ್ರೆರೆಡ್ ಬ್ಯಾಂಡ್ ನಲ್ಲಿ ಸೆರೆಹಿಡಿಯುತ್ತವೆ.
ಮುಂದಿನ ಬೇಸಿಗೆಯ ವೇಳೆಗೆ ಈ ಯೋಜನೆಗೆ ಕೈಜೋಡಿಸಿದ ಎಲ್ಲ ದೇಶಗಳ ವಿಜ್ನಾನಿಗಳು ಚೀನಾದಲ್ಲಿ ಸಭೆ ಸೇರಲಿದ್ದು ನಗರಿ ವೀಕ್ಷಣಾಲಯಕ್ಕೆ ಬೇಕಾದ ಟೆಲಿಸ್ಕೋಪ್ ಗಳ ಬಗ್ಗೆ ನಿರ್ಧರಿಸಲಿದ್ದಾರೆ. ತೈವಾನ್ ದೇಶ 50-ಸೆಂಟಿಮೀಟರ್ ಗಳ ಆಪ್ಟಿಕಲ್ ಟೆಲಿಸ್ಕೋಪ್ ನ್ನು ನಗರಿ ವೀಕ್ಷಣಾಲಯಕ್ಕೆ ಕಳಿಸುವ ಇಂಗಿತ ವ್ಯಕ್ತಪಡಿಸಿದೆ. ಜಪಾನ್ ದೇಶವು 60-ಸೆಂಟಿಮೀಟರ್ ಗಳ ಆಪ್ಟಿಕಲ್ ಮತ್ತು ಇನ್ಫ್ರೆರೆಡ್ ಟೆಲಿಸ್ಕೋಪ್ ಗಳನ್ನು ಕಳಿಸುವ ಯೋಚನೆ ಹೊಂದಿದೆ. ಚೀನಾ ದೇಶವು ಎರಡು ಅತೀ ದೊಡ್ಡ ಟೆಲಿಸ್ಕೋಪ್ ಗಳನ್ನು ತಯಾರಿಸುವ ಯೋಜನೆ ಸಿದ್ದಪಡಿಸುತ್ತಿದೆ.
ನಗರಿಯ ಬಾಹ್ಯಾಕಾಶ ವೀಕ್ಷಣಾಲಯಕ್ಕೆ ಅವಶ್ಯಕವೆನಿಸುವ ಇನ್ನೂ ಹಲವು ರೀತಿಯ ಉಪಕರಣಗಳನ್ನು ನಿರ್ಧರಿಸಲು ಮುಂದಿನ 2-3 ವರ್ಷಗಳಲ್ಲಿ ವೀಕ್ಷಣಾಲಯದಲ್ಲಿ ಸಂಗ್ರಹಿಸುವ ದಾಖಲೆಗಳು ದೊರೆತ ಮೇಲಷ್ಟೇ ನಿರ್ಧರಿಸಲು ಸಾಧ್ಯ ಎಂದು ವಿಜ್ನಾನಿ ಕೈಫು ಹೇಳುತ್ತಾರೆ. ಆದರೆ ಹಲವರನ್ನು ಕಾಡುತ್ತಿರುವ ಪ್ರಶ್ನೆಯೆಂದರೆ ಚೈನೀಸ್ ಸರಕಾರವು ಕಾಲಕಾಲಕ್ಕೆ ಫಾರಿನರ್ಸ್ ಗಳಿಗೆ ಟಿಬೆಟ್ ಗೆ ಬರಲು ಅನುಮತಿ ನಿಷೇದಿಸುತ್ತಿರುತ್ತದೆ. ಇದರಿಂದ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ವೀಕ್ಷಣಾಲಯಕ್ಕೆ ತೊಡಕಾಗಬಹುದು ಎಂಬುದು ಹಲವರ ಅಭಿಪ್ರಾಯ. ಚೈನೀಸ್ ವಿಜ್ನಾನಿಗಳು ಚೈನಾ ಸರಕಾರದೊಡನೆ ಈ ವಿಷಯವಾಗಿ ಚರ್ಚೆ ನಡೆಸುತ್ತಿವೆ. ಎಲ್ಲವೂ ಸರಾಗವಾದಲ್ಲಿ ಏಷಿಯಾದ ಬಾಹ್ಯಾಕಾಶ ವಿಜ್ನಾನಿಗಳ ಬಹುದಿನಗಳ ಕನಸು ಶೀಘ್ರದಲ್ಲೇ ನನಸಾಗಲಿದೆ

---- ದಿಕ್ಸೂಚಿ November 2012



ರಷ್ಯಾದಿಂದ ಏಷ್ಯಾಗೊಂದು ತೂಗು ಸೇತುವೆ



ರಷ್ಯಾದಿಂದ ಏಷ್ಯಾ ಗೆ ಒಂದು ಸೇತುವೆ ನಿರ್ಮಿಸಿದರೆ ಹೇಗಿರುತ್ತೆ... ಇದು ನಿಜವಾಗುವ ಸೂಚನೆ ಕಂಡುಬರುತ್ತಿದೆ. ರಷ್ಯಾಕ್ಕೆ ಸೇರಿದ ಒಂದು ನಡುಗಡ್ಡೆ ರಸ್ಕಿ ಐಲ್ಯಾಂಡ್ಸ್ ಗೆ ರಷ್ಯದಿಂದ ಒಂದು ಸೇತುವೆ ನಿರ್ಮಿಸುವ ಯೋಜನೆ ಸಿದ್ದವಾಗುತ್ತಿದೆ. ಈ ಸೇತುವೆ ಆರ್ಕಿಟೆಕ್ಚರ್ ಕ್ಷೇತ್ರದಲ್ಲಿ ಒಂದು ಅದ್ಭುತವೆನಿಸಲಿದ್ದು ಜಗತ್ತಿನ ಅತೀ ಉದ್ದದ ತೂಗುಸೇತುವೆಯಾಗಲಿದೆ. 3100 ಮೀಟರ್ ಉದ್ದವಿರುವ ಹಾಗೂ ಐಫೆಲ್ ಟವರ್ ನಷ್ಟೆ ಎತ್ತರದ ಈ ಸೇತುವೆಯ ನಿರ್ಮಾಣಕ್ಕೆ 1 ಬಿಲಿಯನ್ ಡಾಲರ್ ಗಳು  ಖರ್ಚಾಗಲಿವೆ ಎಂದು ಅಂದಾಜಿಸಲಾಗಿದೆ. ಬರೀ 5000 ಜನರು ವಸತಿಯಾಗಿರುವ ಈ ನಡುಗಡ್ಡೆಗೆ ಇಷ್ಟೊಂದು ಖರ್ಚು ಮಾಡಿ ಸೇತುವೆ ನಿರ್ಮಿಸುವುದು ಮೇಲ್ನೋಟಕ್ಕೆ ಅರ್ಥಹೀನ ಎನಿಸಿದರೂ ಈ ಸೇತುವೆಯಿಂದ ಬೇರೆಯದೇ ರೀತಿಯಲ್ಲಿ ದೊಡ್ಡ ಪ್ರಮಾಣದ ಪ್ರಯೋಜನ ಪಡೆಯಬೇಕು ಎಂಬುದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯೋಚನೆ. ಈ ಯೋಜನೆಯ ಮೂಲಕ ಇಷ್ಟು ವರ್ಷಗಳ ಕಾಲ ರಷ್ಯಾ ಸರಕಾರದ ಅಲಕ್ಷ್ಯಕ್ಕೆ ಒಳಗಾದ ಪೂರ್ವ ಭಾಗದ ಗಡಿ ಪ್ರದೇಶಗಳ ಬೆಳವಣಿಗೆ ಹಾಗೂ ಏಷ್ಯಾದ ಜೊತೆಗೆ ತನ್ನ ವ್ಯಾವಹಾರಿಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವ ಯೋಜನೆ ಸಿದ್ದಪಡಿಸುತ್ತಿದೆ ರಷ್ಯಾದ ಪುಟಿನ್ ಸರಕಾರ. ರಷ್ಯಾದ ಪೂರ್ವ ಗಡಿಪ್ರದೇಶದ ಸುಧಾರಣಾ ಯೋಜನೆ ಹಂತ ಹಂತವಾಗಿ ಹಲ ವರ್ಷಗಳಿಂದ ನಡೆಯುತ್ತಲೇ ಇದೆ. ಪೂರ್ವ ಗಡಿಯಲ್ಲಿರುವ ವ್ಲೋಡಿವೊಸ್ಟೋಕ್ ಪ್ರದೇಶಕ್ಕೆ ಮಾಸ್ಕೋದಿಂದ 9300 ಕಿಲೋ ಮೀಟರ್ ಗಳಷ್ಟು ಉದ್ದದ ರೈಲ್ ಲೈನ್ ನಿರ್ಮಿಸಲಾಗಿದೆ.
ಸೋವಿಯತ್ ಒಕ್ಕೂಟಗಳ ಉದ್ದ ಕಾಲದಲ್ಲಿ ಈ ವ್ಲಾಡಿವೊಸ್ತೋಕ್ ಪ್ರದೇಶ ಮಿಲಿಟರಿ ಕಾರ್ಯಾಚರಣೆಗಳ ಪ್ರಮುಖ ತಾಣವಾಗಿತ್ತು.  ತದನಂತರ ಈ ಪ್ರದೇಶ ಕೈದಿಗಳು ಹಾಗೂ ನಿರಾಶ್ರಿತರ ವಲಸೆ ಪ್ರದೇಶವಾಯ್ತು. 90 ರ ದಶಕಗಳಲ್ಲಿ ಈ ಪೂರ್ವ ಗಡಿಪ್ರದೇಶ ರಷ್ಯಾ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಯ್ತು. ಇದರಿಂದಾಗಿ ಅಲ್ಲಿ ಸ್ಥಳೀಯ ಸ್ವಾತಂತ್ರ್ಯ ಗಲಭೆ ಶುರುವಾಯ್ತು. ಅಲ್ಲಿ ಕೆಲವು ಸಂಘಟನೆಗಳು ಆ ಪ್ರದೇಶವನ್ನು ರಷ್ಯದಿಂದ ಬೇರ್ಪಡಿಸಿ ಸ್ವತಂತ್ರ ಪ್ರದೇಶವನ್ನಾಗಿಸಲು  ಚಳುವಳಿ ಶುರುಮಾಡಿದವು. ಈ‌ಸಮಯದಲ್ಲಿ ಹೆಚ್ಚಿನ ಜನ ಆ ಪ್ರದೇಶ ತ್ಯಜಿಸಿ ಹೋದರು. ಈ ಸಂದರ್ಭದಲ್ಲಿ ಇಲ್ಲಿನ ಒಟ್ಟೂ ಜನಸಂಖ್ಯೆಯಲ್ಲಿ ಸುಮಾರು 20% ನಷ್ಟು ಜನರು ಈ ಪ್ರದೇಶ ತ್ಯಜಿಸಿ ವಲಸೆ ಹೋದರು. ಹಾಗಾಗಿ ಈಗ ಈ ಪ್ರದೇಶದ ಜನಸಂಖ್ಯೆ ಬರೀ 6 ಮಿಲಿಯನ್ ಗಳಷ್ಟು. ಚೀನಾ ದೇಶದ ಗಡಿಯಲ್ಲಿರುವ ಈ ಪ್ರದೇಶದ ಜನಸಂಖ್ಯೆ ಚೀನಾ ದೇಶದ 130 ಮಿಲ್ಲಿಯನ್ ಜನಸಂಖ್ಯೆಗೆ ಹೊಲಿಸಿದರೆ ತೀರಾ ಕಡಿಮೆ. ರಷ್ಯಾದ ಈ ರಸ್ಕಿ ಐಲ್ಯಾಂಡ್ ಸ್ವಲ್ಪ ಮಟ್ಟಿಗೆ ಚೈನೀಸ್ ಜನಸಂಖ್ಯೆಯನ್ನು ಕೂಡ ಹೊಂದಿರುವುದರಿಂದ ಈ ನಡುಗಡ್ಡೆಯನ್ನು ಚೀನಾ ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಭಯ ಕೂಡ ರಷ್ಯಾ ದೇಶಕ್ಕೆ ಇತ್ತು. ಹಾಗಾಗಿಯೇ ಈ ರಸ್ಕಿ ಐಲ್ಯಾಂಡ್ ನ ಮೇಲೆ ಸಂಪೂರ್ಣ ಆಡಳಿತಾತ್ಮಕ ಹಿಡಿತ ಸಾಧಿಸಲು ಕೂಡ ಈ ಸೇತುವೆಯು ಸಹಕಾರಿಯಾಗಲಿದೆ. ರಷ್ಯಾದ ಪೂರ್ವ ಗಡಿ ಪ್ರದೇಶಗಳ ಮೂಲಕ ಸಂಪರ್ಕ ಕೊಂಡಿ ಬೆಸೆದಿರುವ ಈ ಐಲ್ಯಾಂಡ್ ನ ಸುಧಾರಣೆಯ ಜೊತೆಗೆ ರಷ್ಯಾದ ಈ ಪೂರ್ವ ಗದಿಪ್ರದೇಶಗಳೂ ಕೂಡ ಅಭಿವೃದ್ಧಿಯ ಬೆಳಕು ಕಾಣುತ್ತಿವೆ. ಈಗ ರಷ್ಯಾ ಕೈಗೊಳ್ಳುತ್ತಿರುವ ಈ ಪೂರ್ವ ಗಡಿ ಪ್ರದೇಶದ ಸುಧಾರಣಾ ಕ್ರಮಕ್ಕೆ ಮುಖ್ಯ ಕಾರಣ ಈ ಪ್ರದೇಶದಲ್ಲಿ ಕಂಡುಬರುವ ಹೇರಳವಾದ ನೈಸರ್ಗಿಕ ಸಂಪನ್ಮೂಲಗಳು. ಇಲ್ಲಿ ಹೆರಳವಾಗಿರುವ ಖನಿಜ ಸಂಪತ್ತು, ಲೋಹಗಳು, ಅರಣ್ಯ ಸಂಪತ್ತುಗಳು ಪುಟಿನ್ ನೇತ್ರತ್ವದ ರಷ್ಯಾ ಸರಕಾರವನ್ನು ಪೂರ್ವ ಗಡಿಪ್ರದೇಶಗಳತ್ತ ಸೆಳೆದಿವೆ. ಇದಕ್ಕಿಂತಲೂ ಪ್ರಮುಖ ಕಾರಣವೆಂದರೆ ಏಷ್ಯಾದ ಜೊತೆಗೆ ವಾಣಿಜ್ಯ, ವ್ಯವಹಾರಗಳ ಪ್ರಯೋಜನ ಪಡೆದುಕೊಳ್ಳುವುದು. ಅತಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಏಷ್ಯಾದಲ್ಲಿ ಈಗ ನೈಸರ್ಗಿಕ ಶಕ್ತಿ ಮೂಲಗಳು ಹಾಗೂ  ಕಚ್ಚಾ ವಸ್ತುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಉತ್ತಮ ಮಾರುಕಟ್ಟೆ ಒದಗಿಸುತ್ತಿದೆ. ಈ ಅವಕಾಶದ ಸದ್ಬಳಕೆ ಪಡೆದುಕೊಳ್ಳುವುದು ಈ ಸೇತುವೆ ನಿರ್ಮಾಣದ ಮುಖ್ಯ ಉದ್ದೇಶ ಎನ್ನಬಹುದು. ಏಷ್ಯಾದ ಜೊತೆಗೆ ವಾಣಿಜ್ಯ ವ್ಯವಹಾರಗಳ ಅಭಿವೃದ್ದಿಗೆ ಈ ಸ್ಥಳ ಪ್ರಶಸ್ತವಾಗಿದೆ. ವಾಣಿಜ್ಯ ವ್ಯವಹಾರಗಳಲ್ಲಿ ಪ್ರಮುಖವೆನಿಸುವ ಸರಕು ಸಾಗಣೆಗೆ ಇದು ಹೇಳಿ ಮಾಡಿಸಿದ ಜಾಗ. ರಷ್ಯಾದ ಗ್ಯಾಸ್ ಹಾಗೂ ತೈಲ ಸಂಪನ್ಮೂಲಗಳನ್ನು ಏಷ್ಯಾದ ಮಾರುಕಟ್ಟೆಗಳಿಗೆ ಈ ಪ್ರದೇಶದ ಮೂಲಕ ಸರಾಗವಾಗಿ ಸಾಗಿಸಬಹುದು ಹಾಗೂ ಏಷ್ಯಾದಲ್ಲಿ ಉತ್ಪಾದನೆಗೊಂಡ ವಸ್ತುಗಳನ್ನು ರಷ್ಯಾದ ಮಾರುಕಟ್ಟೆಗಳಿಗೆ ಸಾಗಣೆ ಮಾಡಲು ಅನುಕೂಲಕರವಾಗಿದೆ. ಅಲ್ಲದೇ, ಈಗ ರಷ್ಯಾ ಸರಕಾರ ಆಸ್ತೆಯಿಂದ ನಿರ್ಮಿಸಿರುವ ಹೊಸ ಹೊಸ ರಸ್ತೆಗಳು, ಸೇತುವೆಗಳು, ಅಭಿವೃದ್ದಿಗೊಳಿಸಲ್ಪಟ್ಟ ಎಲ್ಲಾ ಮೂಲ ಸೌಕರ್ಯಗಳಿಂದಾಗಿ ಈ ಪ್ರದೇಶ ರಷ್ಯಾದ ಮುಂದಿನ ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ. ಆದರೆ ಅತಿಯಾದ ಬೃಷ್ಟಾಚಾರಕ್ಕೆ ಹೆಸರಾದ ಈ ಪ್ರದೇಶದಲ್ಲಿ ಸರಕಾರಿ ನೀತಿ ನಿಯಮಗಳು, ರಫ್ತು ಆಮದುಗಳಿಗೆ ಇರುವ ಆಡಳಿತ ತೊಡಕುಗಳು, ತೆರಿಗೆಯ ನೀತಿಗಳು ವಾಣಿಜ್ಯ ವ್ಯವಹಾರಗಳ ಬೆಳವಣಿಗೆಗೆ ದೊಡ್ಡ ತೊಡಕಾಗಿವೆ. ಹಾಗಾಗಿ ಈ ತೊಡಕುಗಳ ನಿವಾರಣೆಗೆ ಸರಕಾರ ಪ್ರಬಲ ಕ್ರಮ ಕೈಗೊಳ್ಳುವುದು ಅತಿ ಅವಶ್ಯಕವಾಗಿದೆ. ಈಗ ರಷ್ಯಾ ತನ್ನ ಪೂರ್ವ ಗಡಿಪ್ರದೇಶಗಳಲ್ಲಿ ನಿರ್ಮಿಸಿರುವ ಸೇತುವೆಗಳು, ಅತಿದೊಡ್ಡ ರೈಲು ಲಿಂಕ್ ಗಳು ಇಂಥ ದೊಡ್ಡ ದೊಡ್ಡ ಯೋಜನೆಗಳಲ್ಲಿ ರಷ್ಯಾದ ಸಾಮರ್ಥ್ಯವನ್ನು ನಿರೂಪಿಸಿವೆ. ಆದರೆ ಈ ಪ್ರದೇಶಗಳಲ್ಲಿ ಈಗ ಸಮರ್ಥ ಸರಕಾರಿ ಆಡಳಿತ ಅತಿ ಅವಶ್ಯವಾಗಿದೆ. ಬ್ರಷ್ಟಾಚಾರದಿಂದ ಬಳಲುತ್ತಿರುವ ಸರಕಾರಿ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿನ ಈ ಬಲಹೀನತೆಯನ್ನು ತೊಲಗಿಸಿ ಸಮರ್ಥ ಹಾಗೂ ದಕ್ಷ ಆಡಳಿತ ಜಾರಿಗೆ ಬರಬೇಕಾಗಿದೆ. ಇಲ್ಲವಾದಲ್ಲಿ, ವಾಣಿಜ್ಯೋದ್ದೇಶಗಳಿಗಾಗಿ ಇಷ್ಟೊಂದು ಖರ್ಚುವೆಚ್ಚಗೊಳಿಸಿ ಅಭಿವೃದ್ದಿಗೊಳಿಸಿರುವುದು ವ್ಯರ್ಥವಾಗಿಬಿಡುವ ಸಂಭವವಿದೆ. ಹಾಗೂ ರಸ್ಕಿ ಐಲಾಂಡ್ ಗೆ ನಿರ್ಮಿಸಲಾಗುತ್ತಿರುವ ಈ ಸೇತುವೆ ಒಂದು ಮಹತ್ವಾಕಾಂಕ್ಷಿ ಉದ್ದೇಶದ ವ್ಯಫಲ್ಯದ ಪ್ರತೀಕವಾಗಿಬಿಡುವ ಸಂಭವವಿದೆ

---ದಿಕ್ಸೂಚಿ October 2012