Wednesday, April 3, 2013

ಹೆಣ್ಣಿನ ಹೋರಾಟಕ್ಕೆ ಕೊನೆ ಎಂದು ? ..

20 ಶತಮಾನಗಳಿಂದ ಬೆಳೆದುಬರುತ್ತಿರುವ ನಾಗರೀಕತೆ ಮನುಷ್ಯನನ್ನು ಸಾಣೆ ಹಿಡಿದು ಪರಿಪಕ್ವಗೊಳಿಸುವ ಬದಲು ಅಮಾನವೀಯತೆಯನ್ನು, ಕೃತಕತೆಯನ್ನು ತುಂಬುತ್ತಾ ಯಾವ ದಿಕ್ಕಿಗೆ ಸಾಗಿದೆ ಜಗತ್ತು ಎಂದು ಬೆಚ್ಚಿ ಬೀಳಿಸುವಂತ ಘಟನೆ ದೆಹಲಿಯ ಯುವತಿಯ ಮೇಲೆ ನಡೆದ ಸರಣಿ ಅತ್ಯಾಚಾರ. ಮಾನಸಿಕ ಹಾಗೂ ಬೌದ್ದಿಕ ಮಟ್ಟದಲ್ಲಿ ಗಂಡಿಗಿಂತ ಒಂದಿನಿತೂ ಕಡಿಮೆ ಇಲ್ಲ ಎಂಬುದನ್ನು ಹೆಣ್ಣು ಈಗಾಗಲೇ ಸಾಬೀತು ಪಡಿಸಿದರೂ ರಟ್ಟೆ ಬಲದಲ್ಲಿ ಕೊಂಚ ಕಡಿಮೆಯಾಗಿರುವುದೇ ಹೆಣ್ಣಿಗೆ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ತಂದೊಡ್ಡುತ್ತಿರುವುದು ನಾಗರೀಕತೆಯ ದೊಡ್ಡ ದುರಂತ. ಎಲ್ಲ ವೈರುಧ್ಯಗಳನ್ನು, ಪ್ರತಿಕೂಲತೆಯನ್ನು ಮೀರಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದ್ದೆ ಹೆಣ್ಣಿನ ಈವರೆಗಿನ ಬಹುದೊಡ್ಡ ಸಾಧನೆ ಎಂಬುದು ಹೆಮ್ಮೆ ಪಾಡಬೇಕಾದ ವಿಷಯವೋ ಅಥವಾ ಬೇಸರ ಪಡಬೇಕಾದ ವಿಷಯವೋ ಎಂಬ ಗೊಂದಲ ಕಾಡುತ್ತದೆ ಕೆಲವೊಮ್ಮೆ. ಯಾಕೆಂದರೆ ಹೆಣ್ಣು ತನ್ನ ಕನಿಷ್ಠ ಮೂಲಭೂತ ಹಕ್ಕುಗಳಿಗಾಗಿ, ರಕ್ಷಣೆಗಾಗಿ ಹೋರಾಟ ಮಾಡಿ ಪಡೆದುಕೊಳ್ಳಬೇಕಾದುದು ನಾಗರೀಕತೆಗೆ, ಸಮಾಜಕ್ಕೆ ಶೋಭೆ ತರುವಂತಹ ವಿಷಯವಂತೂ ಖಂಡಿತ ಅಲ್ಲ. ಆದರೆ ಹೆಣ್ಣಿನ ಹೋರಾಟಕ್ಕೆ ಕೊನೆ ಯಾವಾಗ ಎಂಬ ಪ್ರಶ್ನೆ ಈವರೆಗೂ ಪ್ರಶ್ನೆಯಾಗೇ ಉಳಿದಿದೆ. ಈ ಎಲ್ಲ ಗೊಂದಲಗಳ ನಡುವೆ ಸ್ವಲ್ಪ ಸಮಾಧಾನ ಕೊಡುವ ಸಂಗತಿಯೆಂದರೆ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಬದಲಾಗುತ್ತಿರುವುದು. ಈಗ ಮೊನ್ನೆ ಮೊನ್ನೆಯವರೆಗೂ ಅಡಿಗೆ ಮನೆಗಷ್ಟೇ ಸೀಮಿತವಾಗಿದ್ದ ಹೆಣ್ಣಿನ ಬದುಕು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೂಡ  ತೆರೆದುಕೊಳ್ಳುತ್ತಿದೆ. ಬೇರೆ ಬೇರೆ ಉದ್ಯೋಗ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲೆವು ಎಂಬುದನ್ನೂ ಮಹಿಳೆಯರು ಸಾಬೀತುಪಡಿಸಿದ್ದಾರೆ. ಈ ಬದಲಾವಣೆ ಒಂದೇ ಸಲಕ್ಕೆ ಕ್ಷಿಪ್ರವಾಗಿ ಆಗಿಹೋಗದಿದ್ದರೂ ನಿಧಾನವಾಗಿಯಾದರೂ ಸ್ಥಿರಗತಿಯಲ್ಲಿ ನಡೆಯುತ್ತಿದೆ. ಸಮಾಜದಲ್ಲಿ ಹೆಣ್ಣಿನ ಬಗೆಗಿನ ಧೋರಣೆ ಬದಲಾಗುತ್ತಿದೆ. 90ರ ದಶಕದಲ್ಲಿ ಮಹಿಳೆಯರಿಗಿದ್ದ ಪರಿಸ್ತಿತಿ ಇಂದಿನ ಮಹಿಳೆಗಿಲ್ಲ. ಅಂದಿಗಿಂತ ಇಂದು ಮಹಿಳೆಯರ ಜೀವನ ಮಟ್ಟದಲ್ಲಿ ಗಣನೀಯ ಸುಧಾರಣೆಗಳಾಗಿವೆ. ಅಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇಂದು ಮಹಿಳೆಯರಿಗೆ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳು ಸಿಕ್ಕಿವೆ. ಒಟ್ಟಿನಲ್ಲಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಈ ಬದಲಾವಣೆ ಸಮಾಧಾನ ಕೊಟ್ಟರೂ ಮಹಿಳೆಯರ ಮೇಲಿನ ದೈಹಿಕ ಶೋಷಣೆ ಹಾಗೂ ಮಾನಸಿಕ ಶೋಷಣೆ ಇನ್ನೂ ಮುಂದುವರೆಯುತ್ತಲೇ ಇರುವುದು ಕೂಡ ನಿಜ. ಸೂಕ್ಷ್ಮ ಸಂವೇದಿ ಮಹಿಳೆ ಮಾನಸಿಕವಾಗಿಯೂ ಆರ್ಥಿಕವಾಗಿಯೂ ಪ್ರಬಲವಾದಾಗಲೇ ಈ ಬದಲಾವಣೆಗೆ ಒಂದು ಅರ್ಥ ಬರುವುದು. ಆದರೆ ಇನ್ನೂ ದಿಗಿಲು ಮೂಡಿಸುವ ಪ್ರಶ್ನೆಯೆಂದರೆ ಮಹಿಳೆಯರ ಮೇಲಿನ ದೈಹಿಕ ಹಾಗೂ ಲೈಂಗಿಕ ಹಿಂಸಾಚಾರಕ್ಕೆ ಕೊನೆ ಯಾವಾಗ ಎಂಬುದು. ಜಗತ್ತಿನ ಎಲ್ಲಾ ಕಡೆಗಳಲ್ಲೂ ಮಹಿಳೆಯರು ಈ ಹಿಂಸೆಗೆ ಒಳಪಡುತ್ತಿದ್ದಾರೆ. ಪ್ರಗತಿ ಹೊಂದಿದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಕೂಡ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ತಪ್ಪಿಲ್ಲವಾದರೂ ಪ್ರಗತಿಪರ ರಾಷ್ಟ್ರಗಳಲ್ಲಿ ಇರುವ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಎನ್ನಬಹುದು. ನಮ್ಮ ಉತ್ತರ ಭಾರತದಲ್ಲಂತೂ ಈ ಅಪರಾಧ ತೀರ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ದುರದೃಷ್ಟಕರ. ಹೆಣ್ಣಿನ ಆತ್ಮವಿಶ್ವಾಸವನ್ನು ತೀರಾ ಕುಗ್ಗಿಸಿಬಿಡುವ ಈ ಶೋಷಣೆಯಿಂದ ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳುವ ಉಪಾಯ ಕಂಡುಕೊಳ್ಳಬೇಕಿದೆ. ಹೆಣ್ಣು ರಟ್ಟೆ ಬಲದಲ್ಲಿ ಸ್ವಲ್ಪ ಕಡಿಮೆಯಾಗಿರುವುದೇ ಮಹಿಳೆಯರ ಮೇಲಿನ ಈ ದೈಹಿಕ ಶೋಷಣೆಗೆ ಕಾರಣವಾದರೆ ಮಹಿಳೆಯರಲ್ಲಿರುವ ಸಂಘಟನಾ ಶಕ್ತಿಯೇ ಈ ಪ್ರಶ್ನೆಗೆ ಉತ್ತರವಾಗಬಲ್ಲದೇನೋ. ಇಂದು ಮಹಿಳೆಯರಿಗೆ ಸಿಗುತ್ತಿರುವ ಸಾಮಾಜಿಕ ಸ್ಥಾನಮಾನಕ್ಕೆ ಹಾಗೂ ಮಹಿಳೆಯರ ಜೀವನದಲ್ಲಿ ಆಗಿರುವ ಮಹತ್ತರ ಬದಲಾವಣೆಗೆ ಛಲ ಬಿಡದ ಮಹಿಳೆಯರ ಹೋರಾಟವೇ ಕಾರಣ. ಅಂದು 1780 ರ ಸಮಯದಲ್ಲಿ ಅಲ್ಲೆಲ್ಲೋ ಫ್ರಾನ್ಸ್ ನಲ್ಲಿ ಶುರುವಾದ ಮಹಿಳೆಯರಿಗೂ ಸಮಾಜದಲ್ಲಿ ಸಮಾನತೆ ಹಾಗೂ ಮತ ಚಲಾಯಿಸುವ ಹಕ್ಕುಬೇಕು” ಎಂಬ ಪ್ರತಿಭಟನೆ ಮೊದಲು ಒಂದು ಸಣ್ಣ ಕಿಡಿಯಿಂದ ಶುರುವಾಗಿ ನಂತರ ಮಹಿಳಾ ಸಂಘಟನೆಗಳ ಮೂಲಕ ಬೃಹತ್ ಚಳುವಳಿಯ ರೂಪ ಪಡೆದುಕೊಂಡು ಮಹಿಳೆಯರ ಜೀವನದಲ್ಲಿ ಬದಲಾವಣೆಯ ಅಲೆ ಏಳುವಂತೆ ಮಾಡಿತು.  ಅಂದು ಅಲ್ಲಿ ಶುರುವಾದ  ಬದಲಾವಣೆಯ ಅಲೆಯಿಂದಾಗಿಯೇ ಇಂದು ಜಗತ್ತಿನಾದ್ಯಂತ ಮಹಿಳೆಯರಿಗೆ ಶಿಕ್ಷಣ ಉದ್ಯೋಗ ಸಾಮಾಜಿಕ ಸ್ಥಾನಮಾನ ಸಾಧ್ಯವಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.   18 ಹಾಗೂ 19 ನೇ ಶತಮಾನದಲ್ಲಿ ಲಕ್ಷಾಂತರ ಮಹಿಳೆಯರು ತಮ್ಮ ಸಂಸಾರ, ಗಂಡ, ಮಕ್ಕಳನ್ನು ತೊರೆದು “ಮಹಿಳೆಯರಿಗೆ ಸಮಾನತೆಯ ಹಕ್ಕು” ಎಂಬ ಈ ಕ್ರಾಂತಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟರು.
ಮಹಿಳೆಯರ ಜೀವನದ ಬದಲಾವಣೆಗೆ ಮುನ್ನುಡಿಯಿಟ್ಟ 17 ಮತ್ತು 18 ನೇ ಶತಮಾನದಲ್ಲಿ ಶುರುವಾದ “ಮಹಿಳೆಯರಿಗೂ ಸಮಾಜದಲ್ಲಿ ಸಮಾನತೆ ಹಾಗೂ ಮತ ಚಲಾವಣೆಯ ಹಕ್ಕು ಚಳುವಳಿ.
“ಮಹಿಳೆಯರಿಗೂ ಸಮಾಜದಲ್ಲಿ ಸಮಾನ ಹಕ್ಕು” ಚಳುವಳಿ ಮೊತ್ತ ಮೊದಲು 1780 ಹಾಗೂ 1790 ರ ಸಮಯದಲ್ಲಿ ಫ್ರಾನ್ಸ್ ನಲ್ಲಿ ಶುರುವಾಯಿತು.  ಅಲ್ಲಿಂದ ಮುಂದೆ ಯುರೋಪ್ ನಾದ್ಯಂತ ಶುರುವಾದ ಈ ಚಳುವಳಿಯಲ್ಲಿ ಬರೀ ಮಹಿಳೆಯರೇ ಅಲ್ಲದೆ ಪುರುಷ ವರ್ಗದಲ್ಲಿಯೂ ಕೂಡ ಹಲವಾರು ಜನರ ಹಾಗೂ ಜನನಾಯಕರ ಬೆಂಬಲ ಸಿಕ್ಕಿತ್ತು. ಆಯಾ ದೇಶಗಳಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಈ ಚಳುವಳಿ ನಿರಂತರವಾಗಿ ನಡೆಯುತ್ತಲೇ ಇತ್ತು.
ಆನಂತರ ಹೆಚ್ಚಿನ ಮಟ್ಟದಲ್ಲಿ ಶುರುವಾದ ಈ ಚಳುವಳಿಯಿಂದಾಗಿ 1756 ರಲ್ಲಿ ಅಮೆರಿಕಾದ ಲಿಡಿಯಾ ತಾಫ್ಟ್ ಎಂಬ ಮಹಿಳೆ ಕಾನೂನು ಬದ್ದವಾಗಿ ಮತ ಚಲಾವಣೆ ಮಾಡಿದ ಜಗತ್ತಿನ ಮೊತ್ತ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದರು. ಹಾಗಿದ್ದಾಗ್ಯೂ ಮಹಿಳೆಯರಿಗೆ ಮತ ಚಲಾಯಿಸಲು ಬಹಳಷ್ಟು ನಿಬಂಧನೆಗಳು, ಕಟ್ಟುಪಾಡುಗಳು ಇದ್ದವು. ಮಹಿಳೆ ಮತ ಚಲಾವಣೆಯ ಹಕ್ಕು ಪಡೆಯಲು ಸ್ವಂತ ಆಸ್ತಿ ಹೊಂದಿರಬೇಕು, ಮದುವೆಯಾಗದ ಯುವತಿಯಾಗಿರಬೇಕು ಎಂಬೆಲ್ಲ ಹತ್ತು ಹಲವು ನಿಬಂಧನೆಗಳಿದ್ದವು. ಹಾಗಾಗಿ ಮಹಿಳೆಯರಿಗೆ ಮುಕ್ತ ಮತ ಚಲಾವಣೆಯ ಹಕ್ಕಿಗಾಗಿ ಮಹಿಳಾ ಸಂಘಟನೆಗಳ ಚಳುವಳಿ ನಡೆದೇ ಇತ್ತು. ಈ ಚಳುವಳಿಗೆ ಪೂರ್ತಿ ಜೀವ ಬಂದು ಅದು ರಾಜ್ಯಗಳ, ದೇಶಗಳ ಗಡಿಯ ಇತಿಮಿತಿಗಳನ್ನೂ ಮೀರಿ ಹಲವು ರಾಷ್ಟ್ರಗಳ ಮಹಿಳಾ ಸಂಘಟನೆಗಳು ಒಗ್ಗಟ್ಟಾಗಿ ಬೃಹತ್ ಪ್ರತಿಭಟನೆಯಾಗಿ ರೂಪ ತಾಳಿದ್ದು 1840 ರಲ್ಲಿ. ಆ ವರ್ಷ ಲಂಡನ್ ನಲ್ಲಿ ನಡೆದ “ದಲಿತ ಶೋಷಣೆ ಹಾಗೂ ಗುಲಾಮಗಿರಿ” ಪದ್ದತಿಯ ವಿರುದ್ದದ ಚಳುವಳಿಯಲ್ಲಿ ಭಾಗವಹಿಸಲು ಅಮೆರಿಕಾದಿಂದ ಬಂದ ಮಹಿಳಾ ಪ್ರತಿನಿಧಿ ಎಲಿಜಬೆತ್ ಕ್ಯಾಡಿ ಸ್ಟ್ಯಾಂ ಟನ್ ಹಾಗೂ ಇತರ ಮಹಿಳಾ ಪ್ರತಿನಿಧಿಗಳಿಗೆ ಸಭೆಯಲ್ಲಿ  ಕುಳಿತುಕೊಳ್ಳಲು ಸೀಟು ನಿರಾಕರಿಸಲಾಯಿತು. ಅದಕ್ಕೆ ಕಾರಣ ಅವರು ಮಹಿಳೆಯರು ಎಂಬ ಲಿಂಗಬೇಧ ನೀತಿ. ಅದರಿಂದಾಗಿ ಸಿಟ್ಟಿಗೆದ್ದ ಎಲಿಜಬೆತ್ ಇನ್ನಿಬ್ಬರು ಮಹಿಳಾ ಚಳುವಳಿಗಾರ್ತಿಯರಾದ ಲುಕ್ರೆಷಿಯಾ ಮೊಟ್ಟ್ ಹಾಗೂ ಸುಸ್ಯಾನ್ ಬಿ ಅಂಥೋನಿ ಅವರನ್ನು ಭೇಟಿಯಾಗಿ ಚರ್ಚಿಸಿ “ ಮಹಿಳೆಯರಿಗೆ ಸಮಾನತೆ ಹಾಗೂ ಮತ ಚಲಾವಣೆಯ ಹಕ್ಕು” ಚಳುವಳಿಯನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುವ ಯೋಜನೆ ಕೈಗೊಂಡರು. 



ಹಲವು ದಶಕಗಳ ಕಾಲ ನಡೆದ ಈ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿತು. ಪ್ರಪ್ರಥಮವಾಗಿ ಮಹಿಳೆಯರಿಗೆ ಯಾವುದೇ ನಿಬಂಧನೆಯಿಲ್ಲದೆ ಎಲ್ಲ ಮಹಿಳೆಯರಿಗೂ ಮತ ಚಲಾವಣೆಯ ಹಕ್ಕು ನೀಡಿ ಮಸೂದೆ ಜಾರಿಗೊಳಿಸಿದ ದೇಶ ನ್ಯೂಜಿಲ್ಯಾಂಡ್. 1893 ರಲ್ಲಿ ಈ ಮಸೂದೆ ಜಾರಿಗೊಳಿಸಿದ ನ್ಯೂಜಿಲ್ಯಾಂಡ್ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಲು ವಿಫಲವಾಯಿತು. ನಂತರ ಎರಡನೆಯದಾಗಿ 1894 ರಲ್ಲಿ ಬ್ರಿಟಿಷ್ ಆಡಳಿತದಲ್ಲಿದ್ದ ಸೌತ್ ಆಸ್ಟ್ರೇಲಿಯಾ ಮಹಿಳೆಯರಿಗೆ  ಮತ ಚಲಾವಣೆಯ ಹಕ್ಕು ಒದಗಿಸಿ ಕೊಟ್ಟಿತು. ಇಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೂ ಕೂಡ ಕಲ್ಪಿಸಿಕೊಡಲಾಯ್ತು. ಯುರೋಪ್ ನಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ಒದಗಿಸಿಕೊಟ್ಟ ಮೊದಲ ದೇಶ ಫಿನ್ ಲ್ಯಾಂಡ್. 1906ರಲ್ಲಿ ಫಿನ್ ಲ್ಯಾಂಡ್ ನಲ್ಲಿ ಮತ ಚಲಾಯಿಸುವ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಲ್ಪಿಸಿಕೊಡಲಾಯ್ತು. ಹಾಗೆಯೇ 1907 ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದ ಫಿನ್ ಲ್ಯಾಂಡ್ ನ 19  ಮಹಿಳೆಯರು ಜಗತ್ತಿನ ಪ್ರಥಮ ಮಹಿಳಾ ಜನ ಪ್ರತಿನಿಧಿಗಳೆನಿಸಿದರು. ಅದಾದ ನಂತರ ನಾರ್ವೆ, ಡೆನ್ಮಾರ್ಕ್ ದೇಶಗಳೂ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ಒದಗಿಸಿಕೊಟ್ಟರು. ಮಹಿಳೆಯರ ಚಳುವಳಿಗೆ ದೊಡ್ಡದಾದ ಹಾಗೂ ಎಲ್ಲ ನಿಬಂಧನೆಗಳಿಂದ ಮುಕ್ತವಾದ ಗೆಲುವು ಸಿಕ್ಕಿದ್ದು ಅಮೇರಿಕಾದಲ್ಲಿ ಮಹಿಳೆಯೂ ಕೂಡ ಸಮಾನ ಪ್ರಜೆ ಎಂಬ ನೀತಿ ಜಾರಿಗೊಳಿಸಿದಾಗ ಮಹಿಳಾ ಚಳುವಳಿಗಳಿಗೆ ಮಹತ್ತರ ತಿರುವು ಸಿಕ್ಕಿದಂತಾಯ್ತು. 1920 ರ ಆಗಸ್ಟ್ 26 ರಂದು ಅಮೇರಿಕಾದಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕಿನ ಮಸೂದೆ ಮಂಡಿಸಲಾಯಿತು. ಅದರ ಜೊತೆಗೆ ದೇಶದ ಒಬ್ಬ ಪ್ರಜೆಗೆ ಇರುವ ಹಕ್ಕು ಮತ್ತು ಭಾದ್ಯತೆಗಳು ಮಹಿಳೆಗೂ ಅನ್ವಯಿಸುತ್ತವೆ ಅಂದರೆ ಮಹಿಳೆಯೂ ಸಮಾಜದ ಸಮಾನ ಪ್ರಜೆ ಎಂಬ ಮಸೂದೆಯನ್ನೂ ಕೂಡ ಮಂಡಿಸಲಾಯ್ತು. ಸುಮಾರು 100 ವರ್ಷಗಳ ಹೋರಾಟದ ಫಲವಾಗಿ ಮಹಿಳೆಯರು ಗಳಿಸಿಕೊಂಡ ಈ ಯಶಸ್ಸು ಮಹಿಳೆಯರ ಬದುಕಿನ ದಿಕ್ಕನ್ನೇ ಬದಲಿಸುವ ವರದಾನವಾಯ್ತು. ಅಮೇರಿಕಾದಲ್ಲಿ ಈ ಮಸೂದೆ ಜಾರಿಯಾಗುತ್ತಲೇ ಜಗತ್ತಿನ ಹಲವಾರು ದೇಶಗಳಲ್ಲಿ ಮಹಿಳೆಯರು ಒಗ್ಗಟ್ಟಾಗಿ ಈ ಪ್ರತಿಭಟನೆಯನ್ನು ಮುಂದುವರೆಸಿದರು ಹಾಗೂ ಈ ಮಸೂದೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು.  1948 ರಲ್ಲಿ ಉನೈಟೆಡ್ ನೇಷನ್ಸ್ (ಒಕ್ಕೂಟ ರಾಷ್ಟ್ರಗಳು)ನ ಹ್ಯೂಮನ್ ರೈಟ್ಸ್ ಕಮಿಷನ್ ನಿಂದ ಎಲೆನೋರ್ ರೂಸ್ ವೆಲ್ಟ್ ಅಧ್ಯಕ್ಷತೆಯಲ್ಲಿ ಯುನಿವರ್ಸಲ್ ಡಿಕ್ಲೆರೇಷನ್ ಆಫ್ ಹ್ಯೂಮನ್ ರೈಟ್ಸ್ ಅನ್ನುವ ಅಂತರ್ರಾಷ್ಟ್ರೀಯ ಕಾನೂನನ್ನು ಜಾರಿಗೆ ತರಲಾಯಿತು. ಅದರ ಪ್ರಕಾರ “ಮಹಿಳೆಯರನ್ನೂ  ಸೇರಿ ಪ್ರತಿಯೊಬ್ಬರಿಗೂ ಆಯಾ ದೇಶದ ಸರ್ಕಾರದಲ್ಲಿ ಭಾಗಿಯಾಗುವ ಅಥವಾ ಪ್ರತಿನಿಧಿಯನ್ನು ಆರಿಸುವ ಹಕ್ಕು ಇದೆ ಎಂಬ ಅಂತಾರಾಷ್ಟ್ರೀಯ  ಕಾನೂನು ಪದ್ದತಿಯನ್ನು ಜಾರಿಗೆ ತರಲಾಯ್ತು.
ಅಲ್ಲಿಂದ ಮುಂದೆ ಸಮಾಜದಲ್ಲಿ ಮಹಿಳೆಯ ಸ್ಥಿತಿಗತಿ ನಿಧಾನವಾಗಿಯಾದರೂ ಗಣನೀಯವಾಗಿ ಬದಲಾಗುತ್ತಾ ಬಂತು. ಈವರೆಗೆ ಮಹಿಳೆ ಸಾಧಿಸಿದ್ದು, ಸಾಧಿಸುತ್ತಿರುವುದನ್ನೆಲ್ಲಾ ನಾವು ನೋಡುತ್ತಲೇ ಇದ್ದೇವೆ. ವಿದ್ಯೆಯಲ್ಲಿ, ಉದ್ಯೋಗದಲ್ಲಿ, ಮನೆ ಸಂಸಾರ ಸಂಭಾಳಿಸುವುದರಲ್ಲಿ, ಮಕ್ಕಳನ್ನು ಬೆಳೆಸುವಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾಳೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಎಲ್ಲ ಕೆಲಸಗಳನ್ನೂ ಒಟ್ಟಿಗೇ ಸಮರ್ಥವಾಗಿ ನಿರ್ವಹಿಸಬಲ್ಲಳು ಎಂಬುದನ್ನೂ ಸಾಬೀತುಪಡಿಸಿದ್ದಾಳೆ. ಬೌದ್ಧಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ತಾನು ಗಂಡಿಗಿಂತ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾಳೆ. ಹಾಗಿದ್ದಾಗ್ಯೂ ಮಹಿಳೆಯರಿಗೆ ದೈಹಿಕ ಶೋಷಣೆಯ ವಿರುದ್ಧ ರಕ್ಷಣೆ ನೀಡಬೇಕಾದ ಅಗತ್ಯ ಇಂದಿಗೂ ಇದೆ. ಜಗತ್ತಿನ ಎಲ್ಲೆಡೆಗಳಲ್ಲಿ ಹೆಣ್ಣಿನ ಮೇಲೆ ದೈಹಿಕ ಹಾಗೂ ಲೈಂಗಿಕ ಶೋಷಣೆ ನಡೆಯುತ್ತಲೇ ಇದೆ. ಶೋಷಣೆಗೆ ಒಳಗಾದ ಹಾಗೂ ಒಳಗಾಗುತ್ತಿರುವ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸಲು ಜಗತ್ತಿನಾಧ್ಯಂತ ಹಲವಾರು ಸಂಘ ಸಂಸ್ಥೆಗಳು ಕಾರ್ಯನಿರತವಾಗಿವೆ. ಅಲ್ಲದೇ, ಮಹಿಳೆಯರ ಮೂಲಭೂತ ಹಕ್ಕು ಸಂರಕ್ಷಣೆಗಾಗಿ ಹಾಗೂ ಸಾಮಾಜಿಕ ಸಮಾನತೆಯನ್ನು ಜಾರಿಗೆ ತರಲು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಯೋಜನೆಗಳು ನೆರವಾದವು. 


ಯುನೈಟೆಡ್ ನೇಷನ್ಸ್ ಸಂಸ್ಥೆಯ ಹಲವು ಪ್ರಮುಖ ಅಂತರ್ರಾಷ್ಟ್ರೀಯ ಸ್ತ್ರೀರಕ್ಷಣಾ ಕ್ರಮಗಳು
ಯುನೈಟೆಡ್ ನೇಷನ್ಸ್ ಸಂಸ್ಥೆ ಮಹಿಳೆಯರ ಹಕ್ಕುಗಳ ಸಂರಕ್ಷಣೆಗಾಗಿ 1981 ರ ಸೆಪ್ಟೆಂಬರ್ 3 ರಂದು ಒಂದು ಅಂತರ್ರಾಷ್ಟ್ರೀಯ ಒಡಂಬಡಿಕೆ ಮಾಡಿಕೊಂಡಿತು. ಕನ್ವೇನ್ನ್ಷನ್ ಆನ್ ದ ಎಲಿಮಿನೇಶನ್ ಆಫ್ ಆಲ್ ಫಾರ್ಮ್ಸ್ ಆಫ್ ಡಿಸ್ಕ್ರೀಮಿನೇಶನ್ ಆಗೈನಸ್ಟ್ ವಿಮೆನ್  (CEDAW-Convention on the Elimination of all forms of Discrimination Against Women) ಎಂಬ ಸಾಮೂಹಿಕ ಒಡಂಬಡಿಕೆಗೆ ಕೆಲವೇ ಕೆಲವು ದೇಶಗಳನ್ನು ಹೊರತು ಪಡಿಸಿ ಸುಮಾರು 50 ದೇಶಗಳು ಬಧ್ದ್ಧತೆ ವ್ಯಕ್ತಪಡಿಸಿದವು. ಇರಾನ್, ಸುಡಾನ್, ಸೋಮಾಲಿಯ, ಕತಾರ್, ನೌರು, ಪಾಲೌ, ತೊಂಗ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳು ಈ ಒಪ್ಪಂದಕ್ಕೆ ಸಹಿ ಮಾಡಲು ಹಲವು ಆಕ್ಷೇಪಣೆಗಳನ್ನಿಟ್ಟರು. ಈ ಒಡಂಬಡಿಕೆಯ ಮೂಲ ಉದ್ದೇಶ ಲಿಂಗ ಬೇಧ ನೀತಿಯನ್ನು ತಡೆಗಟ್ಟಿ ಸಮಾಜದಲ್ಲಿ ಪುರುಷರಿಗಿರುವ ಎಲ್ಲ ಹಕ್ಕು ಬಾಧ್ಯತೆಗಳನ್ನು ಮಹಿಳೆಯರಿಗೂ ಅನ್ವಯಿಸುವಂತೆ ನೋಡಿಕೊಳ್ಳುವುದು. ಅಂದರೆ ಮಹಿಳೆಯರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬರದಂತೆ ಕಾಪಾಡಿ ಮಹಿಳೆಗೆ ಸಮಾಜದಲ್ಲಿ ಸಂವಿಧಾನಬದ್ಧವಾಗಿ ಸಮಾನತೆಯನ್ನು ಜಾರಿಗೆ ತರುವುದು.
ಈ ಒಡಂಬಡಿಕೆಯ ಕೆಲವು ಕಾರ್ಯ ಕಲಾಪಗಳು ಈ ಕೆಳಗಿನಂತಿವೆ :
  • ·         ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ಹಂತಗಳಲ್ಲೂ ಡಿಸಿಷನ್ ಮೇಕಿಂಗ್ ನಲ್ಲಿ ಮಹಿಳೆಯರೂ ಕೂಡ ಭಾಗವಹಿಸುವುದನ್ನು ಉತ್ತೇಜಿಸುವುದು.
  • ·         ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಶೋಷಣೆ ನಡೆಯದಂತೆ ನೋಡಿಕೊಳ್ಳುವುದು
  • ·         ಕಾನೂನು ರೀತ್ಯಾ ಎಲ್ಲಾ ರಂಗಗಳಲ್ಲೂ ಹಾಗೂ ಸಮಾಜದಲ್ಲೂ ಮಹಿಳೆಯರು ಹಾಗೂ ಪುರುಷರ ಸಮಾನತೆಯನ್ನು ಕಾಯ್ದುಕೊಳ್ಳುವುದು. ಹಾಗೂ ಕಾನೂನಿನ ಮೂಲಕ ಮಹಿಳೆಯರು ಹಾಗೂ ಯುವತಿಯರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು.
  • ·         ರಕ್ಷಣಾ ದಳಗಳು ಹಾಗೂ ರಕ್ಷಣಾ ಸಂಸ್ಥೆಗಳ ಮೂಲದ ಲಿಂಗ ಬೇಧ ನೀತಿಯಿಂದ ಮಹಿಳೆಯರಿಗೆ ಆಗುವ ಅನ್ಯಾಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದು.
  • ·         ಮಹಿಳೆಯರಿಗೆ ಹೊರೆಯಾಗುವಂತ ಹಾಗೂ ಲಿಂಗ ಬೇಧ ನೀತಿಗೆ ಉತ್ತೇಜನ ಕೊಡುವಂತ ಸಮಾಜದ ರೀತಿ ನೀತಿಗಳು ಹಾಗೂ ಕಟ್ಟಳೆಗಳನ್ನು ಗುರುತಿಸಿ ಅವನ್ನು ಶಮನಗೊಳಿಸಲು ಕ್ರಮ ಕೈಗೊಳ್ಳುವುದು.
  • ·         ಸಾಮಾಜಿಕ, ರಾಜಕೀಯ ಹಾಗೂ ಕಾನೂನು ಕ್ಷೇತ್ರಗಳ ನಿರ್ಧಾರಗಳಲ್ಲಿ  ಹಾಗೂ ಅವುಗಳ ಅಳವಡಿಕೆಯಲ್ಲಿ ಮಹಿಳೆಯ ಅನುಭವಗಳು, ಅಗತ್ಯಗಳು ಹಾಗೂ ದೃಷ್ಟಿಕೋನಗಳನ್ನೂ ಗಣನೆಗೆ ತೆಗೆದುಕೊಂಡು ಮಹಿಳೆಗೆ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ನೆಮ್ಮದಿಯನ್ನು ನೀಡುವಂತೆ ಪ್ರೇರೇಪಿಸುವುದು ಹಾಗೂ ಖಚಿತ ಪಡಿಸಿಕೊಳ್ಳುವುದು.

ಮಹಿಳೆಯರ ಮೇಲೆ ಶೋಷಣೆ ಹಾಗೂ ಮಹಿಳೆಯರ ಮೂಲಭೂತ ಹಕ್ಕಿಗೆ ಚ್ಯುತಿ ಬರುವಂತಹ ಚಟುವಟಿಕೆ ಎಲ್ಲೇ ನಡೆಯುತ್ತಿದ್ದರೂ ರಾಷ್ಟ್ರಮಟ್ಟದಲ್ಲಾಗಲಿ ಅಥವಾ ಪ್ರಾದೇಶಿಕ ಮಟ್ಟದಲ್ಲಾಗಲಿ ಯುನೈಟೆಡ್ ನೇಷನ್ಸ್ ಸಂಸ್ಥೆಯ ಈ CEDAW ಕಾರ್ಯಕ್ರಮಮದಡಿಯಲ್ಲಿ ಸಹಾಯ ಪಡೆದುಕೊಳ್ಳಬಹುದು.

ದೈಹಿಕ ಹಾಗೂ ಲೈಂಗಿಕ ಶೋಷಣೆಯಿಂದ ಮಹಿಳೆಯರ ರಕ್ಷಣೆ –ಯುನೈಟೆಡ್ ನೇಷನ್ಸ್ ಸಂಸ್ಥೆಯ ಒಂದು ಯೋಜನೆ
ಪ್ರೊಟೆಕ್ಷನ್ ಫ್ರಮ್ ಸೇಕ್ಷುಯಲ್ ಎಕ್ಸ್ ಪ್ಲೋಯಿಟೇಶನ್ ಅಂಡ್ ಅಬ್ಯೂಸ್ ( PSEA- Protection From Sexual Exploitation and Abuse ) ಎಂಬ ಯೋಜನೆಯಡಿ ಯುನೈಟೆಡ್ ನೇಷನ್ಸ್ ಸಂಸ್ಥೆ ದೈಹಿಕ ಹಾಗೂ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸಹಾಯ ಹಸ್ತ ನೀಡುವುದಲ್ಲದೆ ಇಂಥ ಅಪರಾಧಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ. ಈ ಕಾರ್ಯಕ್ರಮದಡಿ ನಡೆಯುವ ಪ್ರಮುಖ ಚಟುವಟಿಕೆಗಳೆಂದರೆ :
·         ಯುನೈಟೆಡ್ ಸದಸ್ಯ ರಾಷ್ಟ್ರಗಳು ಅಥವಾ ಸದಸ್ಯರಲ್ಲದ ರಾಷ್ಟ್ರಗಳಲ್ಲಿ ಕೂಡ ಮಹಿಳೆಯರ ಮೇಲೆ ದೈಹಿಕ ಅಥವಾ ಲೈಂಗಿಕ ಶೋಷಣೆ ನಡೆಯದಂತೆ ನೋಡಿಕೊಳ್ಳುವುದು
·         ಈ ವಿಷಯವಾಗಿ ಜನರಲ್ಲಿ ತಿಳುವಳಿಕೆ ಹಾಗೂ ಅರಿವು ಮೂಡಿಸುವ ವಿಡಿಯೋಗಳನ್ನು ಶಿಬಿರಗಳ ಮೂಲಕ ಸಾಮಾನ್ಯ ಜನತೆಗೆ ತಲುಪುವಂತೆ ಮಾಡಿ ಜನರಲ್ಲಿ ಪ್ರಜ್ನೆ ಮೂಡಿಸುವುದು.
·         ಈ ರೀತಿಯ ದೈಹಿಕ ಹಾಗೂ ಲೈಂಗಿಕ ಶೋಷಣೆಗೊಳಗಾದ ಮಹಿಳೆಯರಿಗೆ ಸಹಾಯ ಹಸ್ತ ನೀಡುವುದು ಮತ್ತು ಅವರಿಗೆ ಹೆಚ್ಚಿನ ರಕ್ಷಣೆ ಒದಗಿಸುವುದು. ಈ ಉದ್ದೇಶಕ್ಕಾಗಿಯೇ ಈ ಕಾರ್ಯಕ್ರಮದಡಿ ನಿಗದಿತ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಹಾಗೂ ಈ ಕೆಲಸ ನಿರ್ವಹಿಸುವ ಸಂಸ್ಥೆಯ ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ನೆರವು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಯುನೈಟೆಡ್ ನೇಷನ್ಸ್ ಸಂಸ್ಥೆಯೇ ಅಲ್ಲದೆ ಇನ್ನೂ ಹಲವು ಸಾವಿರ ಸಂಸ್ಥೆಗಳು ಜಗತ್ತಿನಾದ್ಯಂತ ಮಹಿಳೆಯರ ಹಕ್ಕು ರಕ್ಷಣೆಗಾಗಿ ಹಾಗೂ ಮಹಿಳೆಯ ಶೋಷಣೆಯ ವಿರುದ್ದ ರಕ್ಷಣೆಯ ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲದೆ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಸಮಾನ ಎಂಬ ಪ್ರಜ್ನೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಶೋಷಿತ ಮಹಿಳೆಯರಿಗೆ ಸಹಾಯ ಹಸ್ತ ನೀಡಿ ರಕ್ಷಣೆ ನೀಡಲು ಶ್ರಮಿಸುತ್ತಿವೆ. 

ದಿಕ್ಸೂಚಿ, ಫೆಬ್ರುವರಿ 2013

ಮೊಡರ್ನ್ ಆರ್ಟ್ ಅಥವಾ ಆಧುನಿಕ ಕಲಾಕೃತಿಯೊಳಗೊಂದು ಇಣುಕು ನೋಟ


"ಒಂದು ಆಧುನಿಕ ಕಲಾಕೃತಿಯನ್ನು ನೋಡಿದಾಗ ತಕ್ಷಣ ನಮಗನಿಸುವುದು ಇದೇನು ಕ್ಯಾನ್ವಾಸ್ ನ ಮೇಲೆ ಬೇಕಾಬಿಟ್ಟಿ ಬಣ್ಣ ಚೆಲ್ಲಿರುವರೇನೋ ಎಂದು. ಆದರೆ ಅದೇ ಚಿತ್ರವನ್ನು ಗಹನವಾಗಿ ನೋಡಿದಾಗ ಕಲಾಕಾರನ ಉದ್ದೇಶವನ್ನು ವಿಮರ್ಶಿಸತೊಡಗಿದರೆ ಅದೇ ಕಲಾಕೃತಿಯಲ್ಲಿ ಹಲವು ಅರ್ಥಗಳು ತೆರೆದುಕೊಳ್ಳಲಾರಂಭಿಸುತ್ತವೆ. ಆ ಕಲಾಕೃತಿಯಲ್ಲಿನ ಅಸ್ಪಷ್ಟ ಆಕಾರಗಳು ನಮ್ಮ ಮಿದುಳಿನಲ್ಲಿ ಮೂಡುತ್ತ ಆ ಸನ್ನಿವೇಶವನ್ನು ಕಲ್ಪಿಸಿಕೊಳ್ಳುತ್ತಾ ನಮ್ಮ ಭಾವನೆಗೆ ಸ್ಪಂದಿಸತೊಡಗುತ್ತದೆ". ಹೀಗನ್ನುತ್ತಾರೆ ಬ್ರಿಟನ್ ನ ಕಾರ್ಡಿಫ್ ಯೂನಿವರ್ಸಿಟಿಯ ಕಲಾಕಾರ ರಾಬರ್ಟ್ ಪಪ್ಪೆರೇಲ್.  ಈ ಆಧುನಿಕ ಕಲಾಕೃತಿಯನ್ನು ಅದರಲ್ಲಿಯೂ ನಮ್ಮ ಮೆದುಳು ಹೇಗೆ ಅರ್ಥೈಸಿಕೊಳ್ಳುತ್ತದೆ ಎಂಬುದರ ಬಗ್ಗೆ ಅವರು ಯೂನಿವರ್ಸಿಟೀ ಆಫ್ ಜುರಿಚ್ ನ ಆಲುಮೀಟ್ ಇಶೈ ಅವರೊಂದಿಗೆ ಅಧ್ಯಯನ ನಡೆಸುತ್ತಿದ್ದಾರೆ.  ಸಾಮಾನ್ಯವಾಗಿ ಚಿತ್ರಕಲೆಗಳಲ್ಲಿ ಕಾಣುತ್ತಿದ್ದುದು ನಮ್ಮ ಸುತ್ತಲೂ ಕಾಣಸಿಗುವ ವಸ್ತುಗಳು, ವ್ಯಕ್ತಿಗಳು ಅಥವಾ ನಿಸರ್ಗ ಚಿತ್ರಗಳು ಅಥವಾ ಪ್ರಾಣಿಗಳ ಚಿತ್ರ ಸಾಮಾನ್ಯವೆನಿಸುತ್ತದೆ. ಆದರೆ ಈ ಮೊಡರ್ನ್ ಆರ್ಟ್ ಎನ್ನುವುದು ಆ ಚಿತ್ರವನ್ನು ನೋಡಿದಾಗ ನಮ್ಮೊಳಗೆ ಒಂದು ಸನ್ನಿವೇಶದ ಕಲ್ಪನೆಯನ್ನೋ ಅಥವಾ ಯಾವುದೋ ಒಂದು ವಿಶಿಷ್ಟ ಪರಿಸರಕ್ಕೆ ನಮ್ಮನ್ನು ಕರೆದೊಯ್ದಂತೆ ಯಾವುದೋ ಒಂದು ಭಾವನೆಯನ್ನು ಮೂಡಿಸುತ್ತವೆ ಎನ್ನುತ್ತಾರೆ ಪೆಪ್ಪೆರೇಲ್.
ಆಧುನಿಕ ಕಲಾಕೃತಿ ಎಂದರೇನು ಎಂಬುದಕ್ಕೆ ವ್ಯಾಖ್ಯಾನ ಕೊಡುವುದು ಕಷ್ಟವಾದರೂ 1860 ರಿಂದ 1940 ರ ನಡುವಿನ ಅವಧಿಯಲ್ಲಿ ಚಿತ್ರಕಲೆಯಲ್ಲಿ ವಿಭಿನ್ನ ಪ್ರಯೋಗಗಳು ನಡೆದು ಚಿತ್ರಕಲೆಯ ಕ್ರಾಂತಿಗೆ ಕಾರಣವಾಗಿ ಅಲ್ಲಿಂದ ಮುಂದೆ ಶುರುವಾದ ವಿನೂತನ ಚಿತ್ರಕಲಾ ಶೈಲಿ ಮಾಡ್ರನ್ ಆರ್ಟ್ ಎಂದು ಹೆಸರು ಪಡೆದುಕೊಂಡಿತು ಎನ್ನಬಹುದು. ಸಾಮಾಜಿಕ ಹಾಗೂ ನೈಸರ್ಗಿಕ ಜೀವನ ಚಿತ್ರಣವನ್ನು ಚಿತ್ರಪಟಕ್ಕಿಳಿಸುವ ಪ್ರಯೋಗ ಕಲಾ ಪ್ರಪಂಚದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತು. ವಿವಿಧ ರೋಚಕ ಬಣ್ಣಗಳ ಮಿಶ್ರಣದಿಂದ ರಚಿಸಲ್ಪಟ್ಟ, ಕಥೆ ಹೇಳುವ ಚಿತ್ರಗಳು ಚಿತ್ರಕಲಾ ಜಗತ್ತಿಗೆ ಒಂದು ಹೊಸ ಅಧ್ಯಾಯ ಶುರು ಮಾಡಿದವು. ಒಂದು ಚಿತ್ರವನ್ನು ನೋಡಿದಾಗ  ವೀಕ್ಷಕನಲ್ಲಿ ಏನೋ ಒಂದು ಹೊಸ ಅನುಭವ ಕೊಡುವ ವೀಕ್ಷಕನ ಮನದಲ್ಲಿ ಏನೋ ಒಂದು ಲಹರಿ ಮೂಡಿಸುವ ಪ್ರಭಾವಿ ಚಿತ್ರಕಲೆಗಳು ಚಿತ್ರಕಲಾ ರಂಗವನ್ನು ಒಂದು ಉದ್ಯಮವಾಗಿಸುವುವಲ್ಲಿ ಯಶಸ್ವಿಯಾದವು. ವಿಶ್ವ ವಿಖ್ಯಾತ ಕಲಾಕಾರರಾದ ವಿನ್ಸೆಂಟ್ ವ್ಯಾನ್ ಗೋಹ್, ಪಾಲ್ ಸೆಜನ್ನೇ, ಪಾಲ್ ಗೌಗಿನ್, ಜಾರ್ಜ್ ಸ್ಯೂರಟ್, ಹೆನ್ರಿ ಡೇ, ಮುಂತಾದವರು ಮಾಡರ್ನ್ ಆರ್ಟ್ ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ ಬೆಳೆದು ಬಂದ ಮೊಡರ್ನ್ ಆರ್ಟ್ ನಲ್ಲಿ ವಿವಿಧ ಉಪ ಪ್ರಾಕಾರಗಳೂ ಶುರುವಾದವು.
ಮಾಡ್ರನ್ ಆರ್ಟ್ ನ ಕೆಲವು ಉಪ ಪ್ರಕಾರಗಳು
1)   ಎಕ್ಷ್ಪ್ರೆಸ್ಸನಿಸಮ್ (Expressionism) – ಈ ಪ್ರಕಾರದ ಚಿತ್ರಕಲೆಯು ಕಲಾಕಾರನ ಮಾನಸಿಕ ಹಾಗೂ ಭಾವನಾತ್ಮಕ ಅಭಿವ್ಯಕ್ತಿ ಚಿತ್ರಣವನ್ನು ತೋರಿಸುತ್ತವೆ. 20 ನೇ ಶತಮಾನದ ಪ್ರಾರಂಭದಲ್ಲಿ ಕೆಲವು ಜರ್ಮನ್ ಕಲಾಕಾರರಿಂದ ಹೆಚ್ಚು  ಬೆಳವಣಿಗೆ ಹೊಂದಿದ ಈ ಚಿತ್ರಕಲಾ ಪ್ರಕಾರದಲ್ಲಿ ಗಾಢವಾದ ಬಣ್ಣಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಕಲಾಪ್ರಕಾರದ ಪ್ರಮುಖ ಚಿತ್ರಕಾರರೆಂದರೆ ಡಚ್ ಪೇಂಟರ್ ವಿನ್ಸೆಂಟ್ ವ್ಯಾನ್ ಗೋಹ್, ಪಾಬ್ಲೊ ಪಿಕ್ಕಾಸ್ಸೊ,  ಜೇಮ್ಸ್ ಎನ್ಸೊರ್, ಎಡ್ವರ್ಡ್ ಮುಂಚ್, ಪಾಲ್ ಗೌಗಿನ್, ಮುಂತಾದವರು



2)   ಇಂಪ್ರೆಸ್ಶನಿಸಮ್ (Impressionism) – ಕ್ಲಾಡ್ ಮಾನೆಟ್ ಎನ್ನುವ ಚಿತ್ರಕಾರನ ಒಂದು ಚಿತ್ರ ಇಂಪ್ರೆಸ್ಸನ್ : ಸನ್ ರೈಸ್ ಆಫ್ 1872 – ಎನ್ನುವ  ಚಿತ್ರದಿಂದ ಈ ಪ್ರಕಾರಕ್ಕೆ ಇಂಪ್ರೆಸ್ಸನಿಸ್ಮ್ ಎನ್ನುವ ಹೆಸರು ಬಂತು. ನೈಜತೆ ಗೆ ಹೆಚ್ಚು ಒತ್ತುಕೊಟ್ಟ ಈ ಪ್ರಕಾರದ ಚಿತ್ರಕಲೆಯಲ್ಲಿ ಬಣ್ಣ ಹಾಗೂ ಬೆಳಕುಗಳ ಸಂಬಂಧಕ್ಕೆ ಹೆಚ್ಚು ಪ್ರಾಮುಖ್ಯ ಕೊಡಲಾಗುತ್ತದೆ. ಈ ಪ್ರಕಾರದ ಚಿತ್ರಲೆಗೆ ಗಣನೀಯ ಕೊಡುಗೆ ನೀಡಿದ ಕೆಲವು ಕಲಾಕಾರರೆಂದರೆ ಪಾಲ್ ಸೆಜನ್ನೇ, ಎಡ್ಗರ್ ಡೆಗಾಸ್, ಎಡೌಯಾರ್ಡ್ ಮಾನೆಟ್, ಕ್ಲಾಡ್ ಮಾನೆಟ್, ಪಿಯರ್ರೆ ಆಗಸ್ಟೇ ರೇನೋಯಿರ್.

3)   ಫೋರ್ಮಲಿಸಮ್ (Formalism) – ಈ ಪ್ರಕಾರದಲ್ಲಿ ವಿವಿಧ ಆಕಾರ, ರೂಪ, ಬಣ್ಣಗಳ ಶಿಶ್ತುಬದ್ದ ಬಳಕೆಗೆ ಅಂದರೆ ಎಂದಿನಿಂದಲೂ ಚಿತ್ರಕಲೆಯಲ್ಲಿ ಚಾಲ್ತಿಯಲ್ಲಿದ್ದ ಪದ್ದತಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ.   

4)  ಕ್ಯೂಬಿಸಮ್ (Cubism) – ವಿಶ್ವ ವಿಖ್ಯಾತ ಚಿತ್ರಕಾರ ಪಾಬ್ಲೋ ಪಿಕ್ಕಾಸ್ಸೊ ಹಾಗೂ ಜಾರ್ಜ್ ಬ್ರ್ಯಾಕ್ ಅವರುಗಳಿಂದ 19 ನೇ ಶತಮಾನದ ಪ್ರಾರಂಭದಲ್ಲಿ ಬೆಳವಣಿಗೆ ಹೊಂದಿದ ಈ ಪ್ರಕಾರದಲ್ಲಿ ಚಿತ್ರವು ಒಡೆದು ಹೋದ ಗ್ಲಾಸ್ ಚೂರುಗಳಿಂದ ಚಿತ್ರಿಸಿದ ಚಿತ್ರದಂತೆ ಭಾಸವಾಗುತ್ತವೆ( A field of broken glass ) ಎಂದು ಪ್ರಮುಖ ಚಿತ್ರಕಲಾ ವಿಮರ್ಶಕರು ವಿಮರ್ಶಿಸುತ್ತಾರೆ. ಈ ಪ್ರಕಾರದ ಇತರ ಪ್ರಮುಖ ಚಿತ್ರಕಾರರು ಫೆಮಂಡ್ ಲೆಗರ್, ಜುಯಾನ್ ಗ್ರಿಸ್, ಜೀನ್ ಮೇಟ್ಜಿಂಗರ್.  
                                                          ಪಿಕಾಸ್ಸೊ

5)   ಸರ್ರೀಯಲಿಸಮ್ (Surrealism) – ಸಿಗ್ಮಂಡ್ ಫ್ರ್ಯುಡ್ (Sigmund Freud) ಅವರ ಸೈಕಲಾಜಿಕಲ್ ತಿಯರೀಸ್ ಗಳಿಂದ ಪ್ರಭಾವಿತಗೊಂಡು ಅದೇ ಆಧಾರದ ಮೇಲೆ ಈ ಕಲಾ ಶೈಲಿಯನ್ನು ಶುರು ಮಾಡಿದ್ದು ಲೇಖಕರಾದ ಆಂಡ್ರೆ ಬ್ರೇಟೋನ್, ಕವಿಗಳಾದ ಲೂಯಿಸ್ ಅರಗಾನ್ ಹಾಗೂ ಪಾಲ್ ಎಲಾರ್ಡ್, ಮಾನವನ ಅಂತರಾತ್ಮದ ಮಜಲುಗಳನ್ನು ತೆರೆದಿಡಲು ಯತ್ನಿಸುವ ಈ ಕಲಾವಿಧಾನ  19ನೇ ಶತಮಾನದ ಪ್ರಾರಂಭದಲ್ಲೇ ಬೆಳವಣಿಗೆ ಹೊಂದಿತು. ಈ ಕಲೆಗೆ ಕೊಡುಗೆ ನೀಡಿದ ಇತರ ಕಲಾಕಾರರೆಂದರೆ ಮ್ಯಾಕ್ಸ್ ಅರ್ನಾಸ್ಟ್, ಅಂಡ್ರೆ ಮಾಶ್ಶನ್, ಮಾನ್ ರೇ, ರೇನೆ ಮಾಗ್ರಿಟ್ಟೆ, ಸಾಲ್ವಡಾರ್ ಡಾಲಿ.

6)   ಅಬ್ಸ್ಟ್ರಾಕ್ಟ್ ಎಕ್ಸ್ಪ್ರೇಸ್ಶನಿಸಮ್ (Abstract Expressionism) – ಈ ಕಲಾಪ್ರಕಾರದ 1940 ರ ಸಮಯದಲ್ಲಿ ಅಮೇರಿಕಾದಲ್ಲಿ ಬೆಳವಣಿಗೆ ಹೊಂದಿತು. ಈ ಶೈಲಿಯಲ್ಲಿ ಮಾನವನ ಭಾವನೆಗಳ ಪ್ರತಿಬಿಂಭಿಸುವ ಚಿತ್ರಗಳೂ ಹಾಗೂ ಜಗದ ನಿತ್ಯ ಸತ್ಯ ತತ್ವಗಳನ್ನು ಚಿತ್ರಗಳಲ್ಲಿ ಮೂಡಿಸುವ ಪ್ರಯತ್ನ ಮಾಡಲಾಯ್ತು. ಈ ಕಲಾಪ್ರಕಾರಕ್ಕೆ ಹೆಚ್ಚಿನ ಕೊಡುಗೆ ನೀಡಿದ ಕಲಾಕಾರರೆಂದರೆ ಜಾಕ್ಸನ್ ಪೊಲ್ಲೋಕ್, ವಿಲಿಯಂ ಡೇ ಕೂನಿಂಗ್, ಫ್ರಾಂಜ್ ಕ್ಲಿನ್.


7)   ಪೋಪ್ ಆರ್ಟ್ (Pop Art) –  1950 ರ ಸುಮಾರಿಗೆ ಬೆಳವಣಿಗೆ ಹೊಂದಿದ ಈ ಕಲಾವಿಧಾನ ಅಲ್ಲಿಯವರೆಗೆ ಚಿತ್ರಕಲೆಯಲ್ಲಿದ್ದ ಗಂಭೀರತೆಯನ್ನು ಸ್ವಲ್ಪ ಸಡಿಲಗೊಳಿಸಿತು. ಸಿನೆಮಾ ತಾರೆಯರು, ಕಾಮಿಕ್ ಪಾತ್ರಗಳನ್ನು, ಫೇಮಸ್ ಅಡ್ವರ್ಟಯಿಜಿಂಗ್ ಗಳನ್ನು ಚಿತ್ರಕಲೆಗಿಳಿಸಿತು. ಈ ಕಲಾಪ್ರಕಾರವನ್ನು ಬೆಳೆಸಿದ ಕೆಲವು ಪ್ರಮುಖ ಕಲಾಕಾರರೆಂದರೆ ಜಾಸ್ಪರ್ ಜೋನ್ಸ್, ಆಂಡಿ ಅರ್ಹೊಲ್, ರೊಯ್ ಲಿಟೇನ್ಸ್ಟೆನ್.  


ಚಿತ್ರಕಲಾ ಇತಿಹಾಸದಲ್ಲೇ ಅಲೆ ಎಬ್ಬಿಸಿದ ಕೆಲವು ವಿವಾದಾತ್ಮಕ  ಚಿತ್ರಗಳು
ಚಿತ್ರಕಲೆಯ ಇತಿಹಾಸದಲ್ಲೇ ವಿವಾದಾತ್ಮಕ ಎಂಬ ಗುಂಪಿಗೆ ಸೇರುವ ಕೆಲವು ಪ್ರಸಿದ್ದ ಕಲಾಕಾರರ ಚಿತ್ರಗಳು ಇಂದಿಗೂ ಚಿತ್ರಕಲಾ ಜಗತ್ತಿಗೆ ಒಗಟಾಗಿಯೇ ಗೋಚರಿಸುತ್ತವೆ. ವಿವಾದಾತ್ಮಕವಾದರೂ ಬಹಳ ಪ್ರಸಿದ್ದಿ ಹಾಗೂ ಜನಪ್ರಿಯತೆ ಪಡೆದ ಈ ಚಿತ್ರಗಳು ಕಲಾ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ.
1)   20 ನೇ ಶತಮಾನದಲ್ಲಿ ವಿವಾದದ ಅಲೆಯನ್ನೇ ಎಬ್ಬಿಸಿದ ಬಲು ಪ್ರಸಿದ್ದಿ ಪಡೆದ ಈ ಚಿತ್ರದ ಹೆಸರು ಫೌಂಟೆನ್’. ಮಾರ್ಕೆಲ್ ಡಚಾಂಪ್ ಎಂಬ ಚಿತ್ರಕಾರನಿಂದ ಚಿತ್ರಿಸಲ್ಪಟ್ಟ ಈ ಚಿತ್ರದಲ್ಲಿರುವುದು ಒಂದು ಮೂತ್ರಾಲಯ. ಚಿತ್ರಿಸಲ್ಪಟ್ಟ ವಸ್ತುವಿನ ಬಗ್ಗೆ ಅತಿಯಾದ ಮಹತ್ವ ನೀಡುತ್ತಿದ್ದ, ತನ್ನದೇ ಆದ ಶಿಸ್ತುಕ್ರಮ, ನಿಯಮ ಹೊಂದಿದ್ದ ಚಿತ್ರಕಲೆಯ ಇತಿಹಾಸ ಈ ಮೂತ್ರಾಲಯದ ಚಿತ್ರದಿಂದ ಬೆಚ್ಚಿ ಬಿದ್ದಿತ್ತು. ಚಿತ್ರಕಲಾ ಜಗತ್ತಿಗೆ ಒಗಟಂತೆ ಕಾಡಿದ ಈ ಚಿತ್ರ ಕಲಾಜಗತ್ತಿಗೆ ಒಂದು ಮೈಲಿಗಲ್ಲು.
2)   ಡಾಮಿಯನ್ ಹರ್ಶ್ಟ್ ಎಂಬ ಚಿತ್ರಕಾರರ ದ ಫಿಸಿಕಲ್ ಇಂಪೋಸಿಬಿಲಿಟಿ ಆಫ್ ಡೆತ್ ಇನ್ ದ ಮೈಂಡ್ ಆಫ್ ಸಮ್ ಒನ್ ಲಿವಿಂಗ್ಎನ್ನುವ ಚಿತ್ರ ಎಲ್ಲ ದಾಖಲೆಗಳನ್ನೂ ಮೀರಿ ಅತೀ ಹೆಚ್ಚು ಬೆಲೆಗೆ ಮಾರಾಟವಾಯ್ತು. ಈ ಚಿತ್ರದಲ್ಲಿ ಚಿತ್ರಿಸಲ್ಪಟ್ಟಿದ್ದು ಒಂದು ಗ್ಲಾಸ್ ಟ್ಯಾಂಕ್ ನೊಳಗಿನ 13 ಕಾಲುಗಳ ಟೈಗರ್ ಷಾರ್ಕ್. ಚಿತ್ರಿಸಲ್ಪಡುವ ವಸ್ತು ಅಥವಾ ವಿಷಯದ ಬಗೆಗೆ ಒಂದು ಶಿಸ್ತು ಬದ್ದ ನಿಯಮ ಹೊಂದಿದ್ದ ಚಿತ್ರಕಲಾ ರಂಗ ಎಲ್ಲ ಮೀರಿ ನಿಯಮಗಳನ್ನೂ ಮೀರಿ ಚಿತ್ರಿಸಲ್ಪಟ್ಟ ಈ ಚಿತ್ರದ ಬಗ್ಗೆ ವಿವಾದ ಎಬ್ಬಿಸಿತ್ತು.
3)   ಪಾಬ್ಲೊ ಪಿಕಾಸ್ಸೊ ಅವರ ಲೆಸ್ ಡೆಮೊಯೆಸ್ಸೆಲ್ಸ ಡಿ ಅವಿಗ್ನೋನ್ಎನ್ನುವ ಹೆಸರಿನ ಚಿತ್ರದಲ್ಲಿ ಬಣ್ಣಗಳ ಅಸಹಜ ಬಳಕೆ ಹಾಗೂ ಕೃತಕತೆ ಯನ್ನು ಪ್ರತಿನಿಧಿಸುವಂತಿದ್ದ ಈ ಚಿತ್ರ ಚಿತ್ರವಿಮರ್ಶಕರನ್ನು ಆಶ್ಚರ್ಯಗೊಳಿಸಿತ್ತು.
4)  ಗ್ಲುಸ್ತವ್ ಕ್ಲಿಮ್ಟ ಎನ್ನುವ ಚಿತ್ರಕಾರನ ದ ಪೊರ್ಟೈಟ್ ಆಫ್ ಅಡಿಲೆ ಬ್ಲೋಚ್ ಬ್ಯೂರ್ಎಂಬ ಚಿತ್ರ ಆ ಚಿತ್ರದಲ್ಲಿನ ವಿವಾದಾತ್ಮಕ ವ್ಯಕ್ತಿ ಹಾಗೂ ಆ ಪೈಂಟಿಂಗ್ ನಲ್ಲಿನ ವಿನೂತನ ಶೈಲಿಯಿಂದಾಗಿ ಜನಪ್ರಿಯತೆಯ ಜೊತೆಗೆ ವಿವಾದವನ್ನೂ ಸೃಷ್ಟಿಸಿತು.
5)   ಟಕಾಶಿ ಮುರಾಕಾಮಿ ಎಂಬ ಚಿತ್ರಕಾರನ ಹೀರೋಪೋನ್ ಫ್ಯಾಕ್ಟರೀಎಂಬ ಚಿತ್ರ ರಚನೆಯಲ್ಲಿನ ವಿಭಿನ್ನ ಹೊಸ ಪ್ರಯೋಗದಿಂದಾಗಿ ಚಿತ್ರಕಲಾ ರಂಗದ ವಿಮರ್ಶಕರ ಹುಬ್ಬೇರಿಸಿತ್ತು.

ಭಾರತದಲ್ಲಿ ಮೊಡರ್ನ್ ಆರ್ಟ್ ನ ಬೆಳವಣಿಗೆ .
ಭಾರತದಲ್ಲಿ ಮೊಡರ್ನ್ ಆರ್ಟ್ ನ ಮೇಲೆ ಪಾಶ್ಚಿಮಾತ್ಯ ಚಿತ್ರಕಲೆಯ ಗಾಢ ಪ್ರಭಾವವಿರುವುದಕ್ಕೆ ಕಾರಣ ಭಾರತದಲ್ಲಿ ದಶಕಗಳ ಕಾಲ ನಡೆದ ಬ್ರಿಟಿಷ್ ಆಡಳಿತ. ಬ್ರಿಟಿಷರ ಆಡಳಿತದ ಕಾಲದಲ್ಲಿ ಅವರು ಪರಿಚಯಿಸಿದ ಹಾಗೂ ಚಿತ್ರಕಲಾ ಶಾಲೆಗಳಲ್ಲಿ ಕಲಿಸಲ್ಪಡುತ್ತಿದ್ದ ಕೆಲವು ಪಾಶ್ಚಿಮಾತ್ಯ ಚಿತ್ರಕಲಾ ಶೈಲಿ ಇಂದಿಗೂ ಚಾಲ್ತಿಯಲ್ಲಿದೆ. ಆದರೆ ಸ್ವಾತಂತ್ರ್ಯಾ ನಂತರ ಹಲವು ಪ್ರತಿಭಾವಂತ ಕಲಾವಿದರು ಕಲಾಮಾಧ್ಯಮದಲ್ಲಿ ಭಾರತೀಯತೆಯನ್ನು ಪ್ರತಿಬಿಂಬಿಸುವಲ್ಲಿ ಸಫಲರಾದರು. ರವೀಂದ್ರನಾಥ್ ಠಾಗೋರ್ ಅವರ ಶಾಂತಿನಿಕೇತನದಲ್ಲಿ ಚಿತ್ರಕಲೆಯ ಅಭ್ಯಾಸ ನಡೆಸಿದ ಕೆ.ಜಿ ಸುಭ್ರಮಣ್ಯಂ ಎಂಬ ಚಿತ್ರಕಾರರು  ಮುಂದೆ ಭಾರತೀಯ ಚಿತ್ರಕಲಾ ರಂಗದಲ್ಲಿ ಭಾರತೀಯ ಸಂಸ್ಕೃತಿ, ಜಾನಪದ ಕಲೆ, ಗ್ರಾಮೀಣ ಜನಜೀವನದ ಚಿತ್ರಣವನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂದೆ ಹೊಸ ಪ್ರಯೋಗಗಳ ನೆಪದಲ್ಲಿ ಮತ್ತೆ ಪಾಶ್ಚಾತ್ಯ ಶೈಲಿಯೆಡೆಗೇ ವಾಲಿದ ಭಾರತದ ಆಧುನಿಕ ಚಿತ್ರಕಲೆ ಪ್ರಭುದ್ದತೆ ಪಡೆಯುತ್ತಾ ತನ್ನದೇ ಸ್ವಂತಿಕೆಯನ್ನು ರೂಪಿಸಿಕೊಂಡಿತು. ಹಲವು ಹೆಸರಾಂತ ಚಿತ್ರಕಾರರಾದ  ಭೂಪೆನ್ ಕಕ್ಕರ್, ಪರಿತೋಶ್ ಸೇನ್, ಕೃಶೇನ್ ಖನ್ನಾ, ವಿಕಾಸ್ ಬಟ್ಟಾಚಾರ್ಯ, ಧರ್ಮನಾರಾಯಣ ದಾಸ್ ಗುಪ್ತಾ, ಸುನಿಲ್ ದಾಸ್, ಸುಧೀರ್ ಪಟವರ್ಧನ್, ಶ್ಯಾಮಲ್ ದತ್ತ ರೊಯ್, ಘುಲಾಮ್ ಮಹಮ್ಮದ್ ಶೇಕ್, .ಜಿ. ರಾಮಚಂದ್ರನ್, ಶುವಪ್ರಸನ್ನ, ಸಜಲ್ ರೊಯ್, ಜೈ ಜರೊತಿಯ, ಅತುಲ್ ದೊಡಿಯಾ, ಜಯದೀಪ್ ಮೇಹ್ರೋತ್ರಾ ಮುಂತಾದ ಚಿತ್ರಕಾರರು ಹಲವು ಹೊಸ ಪ್ರಯೋಗಗಳ ಜೊತೆಗೆ ಇಂಟರ್ ಪ್ರಿಟೇಟಿವ್ ರಿಯಲಿಸಂ ಕಲಾ ಶೈಲಿಯ ಬೆಳವಣಿಗೆಗೆ ಕೊಡುಗೆ ನೀಡಿದರು.
ಭಾರತೀಯ ಚಿತ್ರಕಲಾ ರಂಗದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಚಿತ್ರಕಾರ ಎಮ್ ಎಫ್ ಹುಸೈನ್. “ಭಾರತದ ಪಿಕಾಸೂಎಂಬ ಪ್ರಖ್ಯಾತಿ ಪಡೆದಿದ್ದ ಎಂ ಎಫ್ ಹುಸೈನ್ ಭಾರತೀಯ ಚಿತ್ರಕಲೆಯನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಿದರು. ಆದರೆ ಮುಂದೆ ವಿವಾದಾತ್ಮಕ ಚಿತ್ರಕಾರನೆಂದು ಹೆಸರು ಪಡೆದ ಎಂ ಎಫ್ ಹುಸೈನ್ ಭಾರತದ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತ ಕೆಲವು ಚಿತ್ರಗಳನ್ನು ಬರೆದು ಇಡೀ ದೇಶದ ಕೆಂಗಣ್ಣಿಗೆ ಗುರಿಯಾದರು. ಜನರ ವಿರೋಧದ ನಡುವೆಯೂ ಇಂಥ ವಿವಾದಾತ್ಮಕ ಚಿತ್ರಗಳನ್ನು ಬರೆಯುವುದನ್ನು ಬಿಡದ ಹುಸೈನ್ ಮತ್ತೆ ಇದೇ ರೀತಿಯ ಪ್ರಯೋಗಗಳನ್ನು ಮುಂದುವರೆಸಿದರು. ಹಿಂದೂ ದೇವತೆಗಳಾದ ಲಕ್ಷ್ಮಿ,  ಸರಸ್ವತಿ, ಪಾರ್ವತಿಯರ ನಗ್ನ ಚಿತ್ರಗಳನ್ನು ಬರೆದಾಗ ದೇಶದಾದ್ಯಂತ ಕಟು ಟೀಕೆಗೆ ಗುರಿಯಾಗಿದ್ದೆ ಅಲ್ಲದೆ ಕೆಲವು ಧಾರ್ಮಿಕ ಸಂಘಗಳು ಜೀವ ಬೆದರಿಕೆಯನ್ನು ಕೂಡ ಹಾಕಿದವು. ಅಷ್ಟಾಗಿಯೂ ಜನರ ಭಾವನೆಗಳಿಗೆ ಏಟಾಗುವಂತ ಚಿತ್ರಗಳನ್ನು ಬರೆಯುವುದನ್ನು ಮುಂದುವರೆಸಿದ ಹುಸೈನ್ ನಗ್ನ ಭರತಾಂಬೆಯ ಚಿತ್ರ ಬರೆದು ಮತ್ತೆ ಟೀಕೆಗೆ ಗುರಿಯಾದರು. ಅವರ ಇನ್ನೊಂದು ಚಿತ್ರದಲ್ಲಿ ಸಂಪೂರ್ಣ ಪೋಷಾಕು ಧರಿಸಿದ ಮುಸ್ಲಿಂ ದೊರೆಯೊಂದಿಗೆ ನಗ್ನ ಬ್ರಾಹ್ಮಣನ ಚಿತ್ರ ಬರೆದು ತೀವ್ರ ಟೀಕೆಗೆ ಒಳಗಾಗಿದ್ದೆ ಅಲ್ಲದೆ ಅವರ ಜೀವಕ್ಕೆ ಅಪಾಯ ಒದಗುವ ಪರಿಸ್ಥಿತಿ ನಿರ್ಮಾಣವಾಗಿ ದೇಶ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬಂತು

ದಿಕ್ಸೂಚಿ, ಆಗಸ್ಟ್ 1012

ಒಂದು ಮುತ್ತಿನ ಕಥೆ



ಮುತ್ತುಗಳು ಪ್ರಕೃತಿಯ ಅಸಾಧಾರಣ ಅಮೂಲ್ಯ ಸೃಷ್ಟಿ. ಅತ್ಯಾಕರ್ಷಕವಾಗಿ ಹೊಳೆಯುವ ಸುಂದರ ಮುತ್ತುಗಳು ಭೂಪರಿಸರದಲ್ಲಿ ಹೇಗೆ ಉತ್ಪಾದನೆಯಾಗುತ್ತವೆ ಎಂಬುದು ಪೃಕೃತಿಯ ಒಂದು ವಿಸ್ಮಯಕಾರಿ ರೋಚಕ ಕಥೆ. ಎಲ್ಲ ವಜ್ರ ವೈಡೂರ್ಯಗಳು ಆಭರಣ ಯೋಗ್ಯ ಲೋಹಗಳು ಭೂಮಿಯಲ್ಲಿನ ಲೋಹದ ಗಣಿಗಳಿಂದ ಸಿಗುತ್ತವೆ. ಆದರೆ ಮುತ್ತು ಎಂಬ ಅಪೂರ್ವ ವಸ್ತುವಿನ ಜನನ ಮಾತ್ರ ಪ್ರಕೃತಿಯ ಒಂದು ಅದ್ಭುತ ಸುವ್ಯಸ್ಥಿತ ಸೃಷ್ಟಿ. ಒಂದು ಜೀವಂತ ಸಮುದ್ರ ಜಂತುವಿನ ಚಿಪ್ಪಿನೊಳಗೆ ಸಿಗುವ ಮುತ್ತುಗಳು ತಯಾರಾಗುವುದು ಒಂದು ಜೈವಿಕ ಕ್ರಿಯೆಯಿಂದ ಎಂದು ಹೇಳಬಹುದು. ಒಯೆಸ್ಟರ್ ಎಂಬ ಸಮುದ್ರಜೀವಿಗಳ ಚಿಪ್ಪಿನೊಳಗಣ ಜೈವಿಕ ಕ್ರಿಯೆಯಿಂದ ಮುತ್ತುಗಳು ದೊರೆಯುತ್ತವೆ. ಒಯೆಸ್ಟರ್ ಕವಚದಿಂದ ಅಥವಾ ಚಿಪ್ಪಿನಿಂದ ಸಿಗುವ ಮುತ್ತುಗಳು ಸಿಗುವಾಗಲೇ ಪರಿಪೂರ್ಣವಾಗಿ ಸಿದ್ದವಾಗಿಯೇ ಸಿಗುತ್ತವೆ. ಯಾವುದೇ ಕಟಿಂಗ್ ಪೊಲೀಷಿಂಗ್ ಬೇಕಿಲ್ಲದೆ ಸಂಪೂರ್ಣ ಸಿದ್ದವಾಗಿ ತಾಯಾರಾಗಿ ಬರುವ ಮುತ್ತುಗಳು ನಿಜಕ್ಕೂ ನಿಸರ್ಗದ ಕೊಡುಗೆ. ಸಮುದ್ರದಿಂದ ಸಿಗುವ ಮುತ್ತುಗಳಲ್ಲಿ ಹೆಚ್ಚಿನವು ಒಯೆಸ್ಟರ್ ಜೀವಿಗಳಿಂದ ಸಿಕ್ಕರೂ ಇದೊಂದೇ ಅಲ್ಲದೆ ಇನ್ನೂ ಹಲವಾರು ಸಮುದ್ರ ಜೀವಿಗಳ ಚಿಪ್ಪುಗಳಲ್ಲಿಯೂ ಕೂಡ ಮುತ್ತು ರಚಿತವಾಗುತ್ತದೆ. ಮುಸ್ಸೆಲ್ಸ, ಕ್ಲಾಮ್ಸ್, ಸ್ಕಾಲ್ಲೋಪ್ಸ್, ಸೀ ಸ್ನೈಲ್ಸ್ ಮುಂತಾದ ಜೀವಿಗಳ ಚಿಪ್ಪುಗಳಲ್ಲಿಯೂ ಮುತ್ತುಗಳು ಸಿಕ್ಕರೂ ಇವು ಬಹಳ ವಿರಳ. ಸಾಲ್ಟ್ ವಾಟರ್ ಹಾಗೂ ಫ್ರೆಷ್ ವಾಟರ್ ಗಳಲ್ಲಿ ಮುತ್ತುಗಳು ಹೆಚ್ಚಾಗಿ ತಯಾರಾಗುತ್ತವೆ.


ಚಿಪ್ಪಿನಲ್ಲಿ ತಯಾರಾಗುವ ಮುತ್ತು.
ಒಯೆಸ್ಟರ್ ಜೀವಿಗಳ ದೇಹ ಚಿಪ್ಪಿನಿಂದ ಕೂಡಿರುತ್ತದೆ. ಜೀವಿಗಳು ಬೆಳೆದು ದೊಡ್ಡವಾಗುತ್ತಿದ್ದಂತೆ ಅವುಗಳ ಚಿಪ್ಪು ಕೂಡ ದೊಡ್ಡದಾಗುತ್ತದೆ. ಒಯೆಸ್ಟರ್ ಜೀವಿಗಳ ದೇಹಲ್ಲಿರುವ ಮಾಂಟಲ್ ಎಂಬ ಅಂಗ ಚಿಪ್ಪುಗಳನ್ನು ತಯಾರಿಸುತ್ತದೆ. ಜೀವಿಯ ಆಹಾರದಲ್ಲಿರುವ ಖನಿಜಾಂಶಗಳನ್ನು ಬಳಸಿಕೊಂಡು ಮಾಂಟಲ್ ಚಿಪ್ಪುಗಳನ್ನು ತಯಾರಿಸುತ್ತದೆ. ಮಾಂಟಲ್ ನಿಂದ ಉತ್ಪಾದಿಸಲ್ಪಡುವ ವಸ್ತುವಿಗೆ ನೆಕರ್ ಎನ್ನುತ್ತಾರೆ. ಚಿಪ್ಪುಗಳ ಒಳಮೈ ಪದರ ನೆಕರ್ ಗಳಿಂದ ಕೂಡಿರುತ್ತದೆ. ಒಯೆಸ್ಟರ್ ದೇಹದ ಅಂಗವಾದ ಮಾಂಟಲ್ ಮತ್ತು ಚಿಪ್ಪಿನ ನಡುವೆ ಬಾಹ್ಯ ವಸ್ತುಗಳ ಪ್ರವೇಶವಾದಾಗ ತನ್ನನ್ನು ತಾನು ಬಾಹ್ಯ ವಸ್ತುವಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಮಾಂಟಲ್ ತನ್ನ ನೆಕರ್ ಪದರಗಳನ್ನು ಬಾಹ್ಯ ವಸ್ತುವಿನ ಸುತ್ತ ಕವಚದಂತೆ ಕಟ್ಟಲು ಶುರು ಮಾಡುತ್ತದೆ. ಇದೇ ಕ್ರಮೇಣ ಮುತ್ತುಗಳಾಗಿ ಮಾರ್ಪಾಟಾಗುತ್ತವೆ. ಬಾಹ್ಯ ವಸ್ತುವಿನ ಸುತ್ತ ನೆಕರ್ ಪದರುಗಳು ಸುತ್ತಿಕೊಂಡು ತಯಾರಾದ ಗೋಲಾಕಾರದ ಕವಚವೇ ನಮಗೆ ಸಿಗುವ ಮುತ್ತುಗಳು. ಈ ನೆಕರ್ ಗೆ ಮದರ್ ಆಫ್ ಪರ್ಲ್ ಎಂದು ಕೂಡ ಕರೆಯುತ್ತಾರೆ. ಈ ನೆಕರ್ ನ ಚಿಪ್ಪಿನಿಂದ ಕೂಡ ಆಭರಣಗಳನ್ನು ತಯಾರಿಸುತ್ತಾರೆ. ಜೆವೆಲ್ಲರಿ ಷಾಪ್ ಗಳಲ್ಲಿ ಮಗೆ ಕಾಣಸಿಗುವ ಹೆಚ್ಚಿನ ಮುತ್ತುಗಳೆಲ್ಲ ಗೋಲಾಕಾರದ ಮುತ್ತುಗಳು. ಇವು ಉತ್ಕೃಷ್ಟ ಗುಣಮಟ್ಟದ ದುಬಾರಿ ಮುತ್ತುಗಳು. ಆದರೆ ಚಿಪ್ಪಿನಲ್ಲಿ ಸಿಗುವ ಎಲ್ಲ ಮುತ್ತುಗಳೂ ಗೋಲಾಕಾರವಾಗಿಯೇ ಇರುತ್ತವೆ ಎನ್ನುವ ಹಾಗಿಲ್ಲ. ಕೆಲವು ಮುತ್ತುಗಳು ಚಿಪ್ಪಿನಲ್ಲಿ ಚೆನ್ನಾಗಿ ಮೂಡಿಬರುವುದಿಲ್ಲ. ಕೆಲವೊಮ್ಮೆ ಗೋಲಾಕಾರವಾಗದೆ ವಿಭಿನ್ನ ಆಕೃತಿಗಳಲ್ಲಿ ಮೂಡಿಬರುತ್ತವೆ. ಮುತ್ತುಗಳಿಗೆ ಬಾರೋಕ್ ಮುತ್ತುಗಳು ಎನ್ನುತ್ತಾರೆ. ಅಲ್ಲದೆ ಮುತ್ತುಗಳು ವಿವಿಧ ಬಣ್ಣಗಳಲ್ಲಿ ಅಂದರೆ ಬಿಳಿ, ಕಪ್ಪು, ಬೂದು, ಸ್ವರ್ಣ ಬಣ್ಣ, ತಿಳಿ ಗುಲಾಬಿ ಬಣ್ಣ, ನೀಲಿ, ಹಸಿರು ಮುಂತಾದ ಇನ್ನೂ ಹಲವಾರು ಬಣ್ಣಗಳಲ್ಲಿ ದೊರೆಯುತ್ತವೆ.


                                                (photo Credit : Wikipedia)
19 ನೆಯ ಶತಮಾನದ ಪ್ರಾರಂಭದವರೆಗೂ ಮುತ್ತುಗಳು ಸಮುದ್ರದಿಂದಲೇ ದೊರೆಯುತ್ತಿತ್ತು. ಸಮುದ್ರದಲ್ಲಿ ಡೈವ್ ಮಾಡಿ ಸಮುದ್ರ ತಟದಿಂದ ಮುತ್ತುಗಳನ್ನು ಆಯ್ದು ತರುತ್ತಿದ್ದರು. ಹೀಗೆ ಸಮುದ್ರದಲ್ಲಿ ಪ್ರಕೃತಿ ಸ್ವಾಭಾವಿಕವಾಗಿ ತಯಾರಾದ ಮುತ್ತುಗಳು ಬಹಳ ದುಬಾರಿ ಮುತ್ತುಗಳು. ಆದರೆ ಇಂದು ಆಭರಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಹೆಚ್ಚಿನ ಮುತ್ತುಗಳು ಪರ್ಲ್ ಫಾರ್ಮಿಂಗ್ ನಿಂದಾಗಿ ಅಂದರೆ ಮುತ್ತು ವ್ಯವಸಾಯದಿಂದಾಗಿ ದೊರೆತಿರುವಂಥವು(ಕಲ್ಚರ್ಡ್ ಪರ್ಲ್ಸ್). ವಿವಿಧ ಪ್ರಬೇಧದ ಒಯೆಸ್ಟರ್ ಗಳು ಹಾಗೂ ಮುಸ್ಸೆಲ್ಸ್ ಗಳು ಮತ್ತಿತರ ಸಮುದ್ರ ಜೀವಿಗಳನ್ನು ಸಾಕಿ ಮಾನವ ಮಧ್ಯಸ್ಥಿಕೆಯಿಂದ ಒಂದು ಸಣ್ಣ ಬೀಜದಂತ ನ್ಯೂಕ್ಲಿಸ್ ಎಂಬ ವಸ್ತುವನ್ನು ಹಾಗೂ ಬೇರೆ ಒಯೆಸ್ಟರ್ ನ ಮಾಂಟಲ್ ನ ಒಂದು ಸಣ್ಣ ಚೂರನ್ನು ಸಮುದ್ರ ಜೀವಿಗಳ ಚಿಪ್ಪುಗಳಲ್ಲಿ ಸೇರಿಸಿ ಮುತ್ತು ತಯಾರಿಸುವಂತೆ ಮಾಡುತ್ತಾರೆ. ನೀರಿನ ಕೆರೆಗಳನ್ನು ನಿರ್ಮಿಸಿಕೊಂಡು ಅಥವಾ ನದಿಗಳಲ್ಲಿ ಮುತ್ತುಗಳ ವ್ಯವಸಾಯ ಮಾಡುತ್ತಾರೆ. ಹೀಗೆ ಕೃತಕ ವಿಧಾನದಿಂದ ಜೀವಿಗಳ ಮೂಲಕ ಮುತ್ತುಗಳನ್ನು ಬೆಳೆಯಲು 2 ರಿಂದ 4 ವರ್ಷಗಳು ಹಿಡಿಯುತ್ತವೆ. ಅವಧಿ ಸುತ್ತಲಿನ ವಾತಾವರಣ, ಸಾಕಿದ ಸಮುದ್ರ ಜೀವಿಯ ಪ್ರಬೇಧ, ಫ್ರೆಷ್ ವಾಟರ್, ಸಾಲ್ಟ್ ವಾಟರ್ ಹಾಗೂ ಇನ್ನೂ ಹಲವಾರು ಅಂಶಗಳ ಮೇಲೆ ಅವಲಂಬಿತವಾಗುತ್ತದೆ. ಫ್ರೆಷ್ ವಾಟರ್ ನಲ್ಲಿ ಮುಸ್ಸೆಲ್ ಎಂಬ ಜೀವಿಯಿಂದ ತಯಾರಿಸುವ ಮುತ್ತುಗಳು ಒಂದು ಜೀವಿಯಿಂದ ಒಂದೇ ಸಲಕ್ಕೆ 50 ಮುತ್ತುಗಳ ವರೆಗೆ ತಯಾರಿಸಬಲ್ಲದು. ಅದೇ ಸಾಲ್ಟ್ ವಾಟರ್ ನಲ್ಲಿ ವಿವಿಧ ಒಯೆಸ್ಟರ್ ಪ್ರಬೇಧದ ಜೀವಿಗಳಿಂದ ತಯಾರಿಸಲ್ಪಡುವ ಮುತ್ತುಗಳು ಒಂದು ಜೀವಿಯಿಂದ ಒಂದು ಸಲಕ್ಕೆ ಒಂದು ಅಥವಾ ಎರಡು ಮುತ್ತುಗಳು ಮಾತ್ರ ದೊರೆಯಬಲ್ಲವು. ಹಾಗಾಗಿ ಸಾಲ್ಟ್ ವಾಟರ್ ಮುತ್ತುಗಳು ಫ್ರೆಷ್ ವಾಟರ್ ಮುತ್ತುಗಳಿಗಿಂತ ದುಬಾರಿ. ಅಲ್ಲದೇ ಕಲ್ಚರ್ಡ್ ಮುತ್ತುಗಳು ಅಥವಾ ಕೃತಕ ವಿಧಾನದ ಮುತ್ತು ತಯಾರಿಕೆಯಲ್ಲಿ ಸಮುದ್ರ ಜೀವಿಗಳ ಹಲವು ಪ್ರಬೇಧಗಳನ್ನು ಬಳಸಿ ವಿವಿಧ ವಿಧಾನಗಳ ಮೂಲಕ ಮುತ್ತುಗಳ ಆಕಾರ, ಬಣ್ಣ, ಗುಣಮಟ್ಟ, ಗಾತ್ರಗಳನ್ನು ಪೂರ್ವ ನಿರ್ಧರಿಸಿ ಬೇಕಾದ ರೀತಿಯಲ್ಲಿ ಮುತ್ತುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮುತ್ತುಗಳ ವ್ಯವಸಾಯ ಹೊಸ ಹೊಸ ವಿಧಾನಗಳನ್ನು ತಂತ್ರಜ್ನಾನಗಳನ್ನು ಅಳವಡಿಸಿಕೊಂಡು ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ.


ಮುತ್ತುಗಳ ವಿವಿಧ ಬಗೆಗಳು.
ಈಗ ಆಭರಣದ ಅಂಗಡಿಗಳಲ್ಲಿ ಸಿಗುವ ಮುತ್ತುಗಳಲ್ಲಿ ಹಲವಾರು ಬಗೆಗಳು ಕಾಣಸಿಗುತ್ತವೆ. ಮುತ್ತುಗಳ ವಿಧಗಳಲ್ಲಿ ಅವುಗಳ ಆಕಾರ, ಅವು ದೊರೆಯುವ ವಿಧಾನ ಇತ್ಯಾದಿ ಹಲವು ಆಧಾರದ ಮೇಲೆ ಬೇರೆ ಬೇರೆ ಹಲವು ವಿಂಗಡನೆಗಳಿವೆ. ಮುತ್ತುಗಳು ದೊರೆಯುವ ವಿಧಾನವನ್ನು ಆಧರಿಸಿ ಎರಡು ಮುಖ್ಯ ವಿಂಗಡನೆಗಳಿವೆ 1) ಫ್ರೆಷ್ ವಾಟರ್ ಪರ್ಲ್ಸ್. 2) ಸಾಲ್ಟ್ ವಾಟರ್ ಪರ್ಲ್ಸ್.
ಮುತ್ತುಗಳು ಸಿಗುವ ಸ್ಥಳ, ಸಮುದ್ರ ಜೀವಿಯ ಪ್ರಬೇಧ, ಮುತ್ತುಗಳ ಬಣ್ಣ ಇವುಗಳನ್ನೆಲ್ಲಾ ಆಧರಿಸಿ ಇನ್ನೂ ಹಲವಾರು ಉಪವಿಂಗಡನೆಗಳಿವೆ. ಕೆಲವು ಪ್ರಮುಖ ಉಪವಿಂಗಡನೆಗಳೆಂದರೆ ಅಕೋಯಾ ಮುತ್ತುಗಳು, ಲೇಕ್ ಬಿವಾ ಮುತ್ತುಗಳು, ಸೌತ್ ಸೀ ಮುತ್ತುಗಳು, ತಹಿತಿಯನ್ ಅಥವಾ ಕಪ್ಪು ಮುತ್ತುಗಳು, ಪರ್ಶಿಯನ್ ಗಲ್ಫ್ ಮುತ್ತುಗಳು ಇತ್ಯಾದಿ ಇನ್ನೂ ನೂರಾರು ಬಗೆಯ ಮುತ್ತುಗಳಿವೆ.
ಅವುಗಳ ಆಕಾರದ ಆಧಾರದ ಮೇಲೆ ಮುಖ್ಯವಾಗಿ 3 ವಿಂಗಡನೆಗಳಿವೆ. : 1) ಸ್ಪೆರಿಕಲ್ ಮುತ್ತುಗಳು : ಸಂಪೂರ್ಣ ಗೋಲಾಕಾರ ಹಾಗೂ ಗೋಲಾಕೃತಿಗೆ ಹತ್ತಿರವೆನಿಸುವ ಆಕಾರದ ಮುತ್ತುಗಳು. 2) ಸಿಮ್ಮೆಟ್ರಿಕಲ್ ಮುತ್ತುಗಳು : ಮೊಟ್ಟೆಯಾಕಾರದ. ಓವಲ್ ಆಕಾರದ ಹಾಗೂ ಗೋಲಕ್ಕಿಂತ ಸ್ವಲ್ಪ ಉದ್ದದ ಮುತ್ತುಗಳು. 3) ಬರೋಕ್ ಮುತ್ತುಗಳು : ಇವು ನಿರ್ದಿಷ್ಟ ಆಕಾರವೆಂದು ಹೇಳಲಾಗದ ಬಿನ್ನ ಆಕಾರದ ಹೊರಮೈ ಹೊಂದಿರುವ ಮುತ್ತುಗಳು.
ಆದಿಮಾನವನಿಂದಲೇ ಮುತ್ತುಗಳ ಆವಿಷ್ಕಾರ.
ಸಾವಿರಾರು ವರ್ಷಗಳ ಹಿಂದೆಯೇ ಪುರಾತನ ಕಾಲದಲ್ಲೇ ಮುತ್ತುಗಳು ಪತ್ತೆಯಾಗಿ ಆದಿಮಾನವನ ಕಾಲದಲ್ಲೇ ಬಳಕೆಯಲ್ಲಿದ್ದವು. ಮಾನವ ನಾಗರೀಕತೆಗಳು ರೂಪುಗೊಳ್ಳುತ್ತಿದ್ದ ಕಾಲದಲ್ಲೇ ಮುತ್ತುಗಳು ಬಳಕೆಯಲ್ಲಿದ್ದ ಬಗ್ಗೆ ಹಲವಾರು ಪುರಾವೆಗಳು ಸಿಕ್ಕಿವೆ. ಬಹುಶಃ ಸಮುದ್ರ ತೀರದಲ್ಲಿ ಆಹಾರಕ್ಕಾಗಿ ಹುಡುಕುತ್ತಿರುವಾಗ ಒಯೆಸ್ಟರ್ ಹಾಗೂ ಅದರೊಳಗಿನ ಮುತ್ತು ದೊರಕಿರಬಹುದು. ಮೊತ್ತ ಮೊದಲ ಮುತ್ತು ಸಿಕ್ಕಿದ್ದು ಎಲ್ಲಿ ಎಂಬುದು ಖಾತ್ರಿಯಾಗಿ ತಿಳಿದಿಲ್ಲವಾದರೂ ಪರ್ಷಿಯನ್ ಗಲ್ಫ್ ರಾಷ್ಟ್ರಗಳ ಸಮುದ್ರ ತೀರಗಳಲ್ಲಿರಬಹುದು ಎಂಬುದು ಭೂವಿಜ್ನಾನಿಗಳ ಊಹೆ. ಪ್ರದೇಶಗಳಲ್ಲಿ ಸಿಕ್ಕ ಕೆಲವು ತುಂಬಾ ಹಳೆಯ ಪುರಾವೆಗಳೆಂದರೆ ಭೂಮಿಯಲ್ಲಿ ಹೂಳಲ್ಪಟ್ಟ ಮಾನವನ ಅಸ್ತಿಯ ಕೈ ಮುಷ್ಟಿಗಳಲ್ಲಿ ಮುತ್ತುಗಳು ಕಂಡುಬಂದಿದ್ದವು. ಭೂವಿಜ್ನಾನಿಗಳ ಅಂದಾಜಿನ ಪ್ರಕಾರ ಹೀಗೆ ಮುತ್ತು ಹಿಡಿದುಕೊಂಡಿರುವ ಅಸ್ಥಿ 6000 ವರ್ಷಗಳಷ್ಟು ಹಳೆಯದು ಅಂದರೆ ಸರಿಸುಮಾರು 4000 BC ಇಸವಿಯ ಕಾಲದಲ್ಲೆ ಮುತ್ತುಗಳ ಬಳಕೆ ಇತ್ತು. ನಿಟ್ಟಿನಲ್ಲಿ ಅಧ್ಯಯನ ನಡೆಸಿದ ಭೂವಿಜ್ನಾನಿಗಳ ತಂಡಕ್ಕೆ ಇನ್ನೂ ಸಾಕಷ್ಟು ಪುರಾವೆಗಳು ದೊರೆತು ಮೇಸಪೋಟೊಮಿಯನ್ ನಾಗರೀಕತೆಯ ಕಾಲದಲ್ಲೇ ಮುತ್ತುಗಳ ವಾಣಿಜ್ಯ ವಹಿವಾಟು ನಡೆಯುತ್ತಿತ್ತು ಎಂದು ಭೂವಿಜ್ನಾನಿಗಳು ಅಭಿಪ್ರಾಯ ಪಡುತ್ತಾರೆ.
ಪರ್ಷಿಯನ್ ಗಲ್ಫ್ ಪುರಾತನ ಕಾಲದಲ್ಲಿ ಮುತ್ತುಗಳ ಆಕರವಾಗಿತ್ತು. ಪರ್ಶಿಯನ್ ಗಲ್ಫ್ ಪ್ರಾಂತ್ಯದ ಹೆಚ್ಚಿನ ಪ್ರದೇಶಗಳಲ್ಲಿ ಮಾನವ ವಾಸ ಯೋಗ್ಯ ವಾತಾವರಣ ಬಹಳ ಕಡಿಮೆ. ನೀರು, ಫಲವತ್ತಾದ ಭೂಮಿ ಇಲ್ಲದ ವಿಪರೀತ ತಾಪಮಾನದ ಪ್ರದೇಶಗಳಲ್ಲಿ ಕೂಡ ಜನರು ವಾಸವಾಗಿದ್ದರು. ಇದಕ್ಕೆ ಕಾರಣ ಅಲ್ಲಿ ಹೇರಳವಾಗಿ ಸಿಗುತ್ತಿದ್ದ ಮುತ್ತು ಎಂದು ಭೂವಿಜ್ನಾನಿಗಳು ಅಭಿಪ್ರಾಯ ಪಡುತ್ತಾರೆ. ಕತಾರ್ ಜುಬಾರಾಹ್ ಎಂಬ ಪ್ರದೇಶ ಮಾನವ ವಾಸಕ್ಕೆ ಬಹಳವೇ ಪ್ರತಿಕೂಲ ವಾತಾವರಣವಿದ್ದರೂ ಕೂಡ 18ನೇ ಶತಮಾನದ ಕಾಲದಲ್ಲಿ ಬಹಳ ಶ್ರೀಮಂತ ಪಟ್ಟಣವಾಗಿತ್ತು. ಬೇಸಿಗೆಯಲ್ಲಿ 120 ಡಿಗ್ರೀ ಗಳಷ್ಟು ತಾಪಮಾನವಿರುತ್ತಿದ್ದ, ನೀರು ಹಾಗೂ ಮರಗಳೇ ಇಲ್ಲದ ಪ್ರದೇಶದ ತುಂಬಾ ಜನವಾಸ್ತವ್ಯವಿತ್ತು ಹಾಗೂ ಪಟ್ಟಣ ಗಲ್ಫ್ ಮುತ್ತುಗಳ ವಾಣಿಜ್ಯ ವಹಿವಾಟಿನ ಪ್ರಮುಖ ಕೇಂದ್ರವಾಗಿತ್ತು. ಇತ್ತೀಚೆಗೆ ಭೂವಿಜ್ನಾನಿಗಳು ಕುವೈತ್ ನಿಂದ ಒಮನ್ ಉದ್ದಕ್ಕೂ ನಡೆಸಿದ ಭೂಶೋಧಗಳಲ್ಲಿ ಪುರಾತನ ಕಾಲದಲ್ಲಿ ಪ್ರದೇಶಗಳಲ್ಲಿ ಸಿಗುತ್ತಿದ್ದ ಮುತ್ತುಗಳು, ನಡೆಯುತ್ತಿದ್ದ ಮುತ್ತುಗಳ ವಹಿವಾಟು, ಸಮುದ್ರಗಳಿಂದ ಮುತ್ತುಗಳ ಸಂಗ್ರಹ, ಇವೆಲ್ಲವುಗಳ ಬಗ್ಗೆ ಪುರಾವೆಗಳು ಸಿಗುತ್ತಿವೆ. ಇಂಥ ವಾಸಯೋಗ್ಯವಲ್ಲದ ಪ್ರದೇಶಗಳಲ್ಲೂ ಕೂಡ ಮಾನವ ನಾಗರೀಕತೆ ಬೆಳೆದು ಬಂದಿರುವುದಕ್ಕೆ ಹಾಗೂ ಅಲ್ಲಿನ ಪುರಾತನ ಶ್ರೀಮಂತ ಪಟ್ಟಣಗಳನ್ನು ರೂಪಿಸುವಲ್ಲಿ ಕಾಲದಲ್ಲಿ ಅಲ್ಲಿ ಹೇರಳವಾಗಿ ಸಿಗುತ್ತಿದ್ದ ಮುತ್ತುಗಳೂ ಸಹ ಒಂದು ಬಲವಾದ ಕಾರಣ ಎಂದು ಯೂನಿವರ್ಸಿಟೀ ಕಾಲೇಜ್ ಲಂಡನ್ ಭೂವಿಜ್ನಾನಿಯಾದ ರಾಬರ್ಟ್ ಕಾರ್ಟರ್ ಅಭಿಪ್ರಾಯಪಡುತ್ತಾರೆ.
19 ನೇ ಶತಕದ ಮಧ್ಯದಲ್ಲಿ ಪ್ರದೇಶಗಳಲ್ಲಿನ ಮುತ್ತುಗಳ ವಹಿವಾಟು ಕ್ಷೀಣಿಸಿದರೂ ಕಚ್ಚಾ ತೈಲಗಳ ವಹಿವಾಟು ಗಲ್ಫ್ ರಾಷ್ಟ್ರಗಳಿಗೆ ಮುತ್ತಿನಷ್ಟೇ ಮೌಲ್ಯಯುತವಾದ ನಿಧಿಯನೊದಗಿಸಿತು

ದಿಕ್ಸೂಚಿ,  ಜೂನ್  2012